ಸಂವಿಧಾನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ – ಅಲ್ಲಮಪ್ರಭು ಬೆಟ್ಟದೂರು.

Spread the love

ಕೊಪ್ಪಳ: ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಬೆಳಿಗ್ಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ : ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಿದರು.ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ದರ್ಪಣ ಸಂಸ್ಥೆಯ ಮುಖ್ಯಸ್ಥ ಹೈಕೋರ್ಟ್ ವಕೀಲ್ ಮಂಜುನಾಥ್ ಬಾಗೇಪಲ್ಲಿ ಅವರು ಸಂವಿಧಾನ ಪೀಠಿಕೆ ಬೋಧಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದ ನಂತರ ಮುಖ್ಯ ಅತಿಥಿಯಾಗಿದ್ದ ಅಲ್ಲಮಪ್ರಭು ಬೆಟ್ಟದೂರು ಮುಂದುವರೆದು ಮಾತನಾಡಿ ಡಾ: ಬಿ.ಆರ್. ಅಂಬೇಡ್ಕರ್. ಡಾ: ಬಾಬು ಜಗಜೀವನ್ ರಾಮ್ ಅವರು ಎದ್ದು ಕಾಣತಕ್ಕಂತಹ ನಾಯಕರಾಗಲಿಕ್ಕೆ ಮೂಲ ಕಾರಣ ಶಿಕ್ಷಣ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಭಾರತ ದೇಶದಲ್ಲಿ ಎಲ್ಲಾ ಜಾತಿಗಳ ಜನರಿಗೂ ಕೂಡ ತಮ್ಮ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕಿದೆ. ಭಾರತ ಬಹು ಸಂಸ್ಕೃತಿ. ಬಹು ಭಾಷೆ‌. ಬಹು ಆಹಾರ ಪದ್ಧತಿ. ಬಹು ವಿಧದ ವಸ್ತ್ರಗಳನ್ನು ಉಟತಕ್ಕಂತಹ ದೇಶವಾಗಿದೆ. ಒಬ್ಬ ನಾಯಕ ನಾವು ಬಂದಿದ್ದೇ ಸಂವಿಧಾನವನ್ನು ಬದಲಾಯಿಸಲು ಎಂದು ಹೇಳಿಕೆ ನೀಡುವ ಮೂಲಕ ಕೋಮುವಾದಿ ಪಕ್ಷದ ರಹಸ್ಯ ಕಾರ್ಯ ಸೂಚಿ ಬಹಿರಂಗಪಡಿಸಿದ್ದಾರೆ. ಆ ಪಕ್ಷದವರು ಈ ಬಾರಿ ಅವರಿಗೆ ಸ್ಪರ್ಧಿಸಲು ಅವಕಾಶ ತಪ್ಪಿಸಿದ್ದಾರೆ ಎಂದು ಹೇಳಿದರು.

ದರ್ಪಣ ಸಂಸ್ಥೆಯ ಮುಖ್ಯಸ್ಥ ಹೈಕೋರ್ಟ್ ವಕೀಲ್ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಮಹಿಳೆಯರಿಗೆ. ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡದ ಜನರಿಗೆ ಕಾನೂನು ತರುವಲ್ಲಿ ಅನುವು ಮಾಡಿ ಕೊಟ್ಟಿದ್ದು. ಇದರಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ. ಪೋಸ್ಕೊ ಕಾಯ್ದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ದೌರ್ಜನ್ಯ ತಡೆ ಕಾಯ್ದೆ. ಓಬಿಸಿ ಸೇರಿದಂತೆ ವಿವಿಧ ವಿಶೇಷ ಕಾಯ್ದೆಗಳನ್ನು ನಮ್ಮ ಭಾರತದ ಸಂವಿಧಾನದಿಂದ ತರಲು ಸಾಧ್ಯವಾಯಿತು ಎಂದು ವಿವರಿಸಿದರು.

ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನ ಆಚರಣೆಯೊಂದಿಗೆ ಪ್ರತಿಯೊಬ್ಬರು ಸಂವಿಧಾನ ಕುರಿತು ಎಲ್ಲಾ ಜನರಿಗೂ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋತಾಗ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಲೀಗ್ ಪಕ್ಷದಿಂದ ಅವಕಾಶ ಕಲ್ಪಿಸಿ ಚುನಾವಣೆಯಲ್ಲಿ ಗೆಲ್ಲಿಸಿ. ಸಂವಿಧಾನವನ್ನು ರಚಿಸಲು ಅವಕಾಶ ಮಾಡಿಕೊಟ್ಟಿದ್ದು. ಇದಕ್ಕೆ ಅಂಬೇಡ್ಕರ್ ಅವರು ಪಡೆದ ಉನ್ನತ ಮಟ್ಟದ ಶಿಕ್ಷಣವೇ ಕಾರಣವಾಗಿದೆ. ದಲಿತರ. ಮುಸ್ಲಿಮರ. ಹಿಂದುಳಿದ ವರ್ಗಗಳ.ಅಲ್ಪಸಂಖ್ಯಾತರೊಂದಿಗೆ ಅಂಬೇಡ್ಕರ್ ಅವರು ಸೌಹಾರ್ದತೆ ಹೊಂದಿದ್ದರು ಎಂಬ ಸಂದೇಶವನ್ನು ನೀಡುತ್ತದೆ. ಪ್ರತಿಯೊಂದು ಹಳ್ಳಿಗಳಲ್ಲಿ ದಲಿತ ಯುವಕರಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳ ಅರಿವು ಮೂಡಿಸುವ ಕಾರ್ಯಾಗಾರ ನಡೆಸುವ ತುಂಬಾ ಅಗತ್ಯವಿದೆ. ಗ್ರಾಮೀಣ ಪ್ರದೇಶದ ದಲಿತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ದಲಿತ ನಾಯಕರು ಶ್ರಮಿಸಬೇಕು ಎಂದು ಹೇಳಿದರು. ಮಹಿಳೆಯರ ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣ ಕುರಿತು ಸೌಭಾಗ್ಯ ಎಸ್. ದೊಡ್ಡಮನಿ.ಯಮನೂರು ಬಸವಪ್ರಭು. ಕಾರ್ಯಕ್ರಮ ಸಂಘಟಿಸಿದ್ದ ಭೀಮ್ ಅರ್ಮಿ ಕರ್ನಾಟಕ ಮಿಷನ್ ಜಿಲ್ಲಾಧ್ಯಕ್ಷ ನಿಂಗು ಬೆಣಕಲ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜಂಬಣ್ಣ ನಡುವಲಮನಿ ಮಾತನಾಡಿದರು.ಗೌರಿ ಗೋನಾಳ. ಮರಿಯಮ್ಮ ಚೂಡಿ.ಶಶಿಕಲಾ ಮಠದ ತಂಡ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಕ್ರಾಂತಿ ಗೀತೆಗಳನ್ನು ಹಾಡಿ ಗ್ರಾಮದ ಜನರ ಗಮನ ಸೆಳೆದರು. ಅತಿಥಿಯಾಗಿದ್ದ ವೀರೇಶ್ ತೆಗ್ಗಿನಮನಿ.ಭೀಮ್ ಆರ್ಮಿಯ ಮುತ್ತು ಮುಂತಾದವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ನೀಲಪ್ಪ ದೊಡ್ಡಮನಿ.ನಿರೂಪಣೆ ಅರ್ಜುನ್ ದೊಡ್ಡಮನಿ. ವಂದನಾರ್ಪಣೆ ಸ್ವಾರೇಪ್ಪ ಭಾವಿಮನಿ ಮಾಡಿದರು.

ವಿಶೇಷ ವರದಿಗಾರರು :-ಎಸ್.ಎ.ಗಫಾರ್

Leave a Reply

Your email address will not be published. Required fields are marked *