ಅಂಕಗಳಿಕೆಯೊಂದೇ ಜೀವನವಲ್ಲ, ಅಶ್ವಿನಿ ಅಂಗಡಿ. ಶಿಕ್ಷಕಿ ಹಾಗೂ ಸಾಹಿತಿ ಬದಾಮಿ…

Spread the love

ಅಂಕಗಳಿಕೆಯೊಂದೇ ಜೀವನವಲ್ಲ, ಅಶ್ವಿನಿ ಅಂಗಡಿ. ಶಿಕ್ಷಕಿ ಹಾಗೂ ಸಾಹಿತಿ ಬದಾಮಿ…

ಇನ್ನೇನು 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಿಗೆ ಕ್ಷಣಗಣನೆ ಶುರುವಾಗಿದ್ದು ಮಕ್ಕಳು ಹಾಗೂ ಪಾಲಕರು ಶಿಕ್ಷಕರುಗಳಲ್ಲಿ ಪರೀಕ್ಷಾ ಆತಂಕದ ಛಾಯೆ ಎಲ್ಲರ ಮನ ಮತಿ ಗಳನ್ನು ಆವರಿಸಿವೆ. ನಮ್ಮ ಮಗ/ಳು ಯಾವ ರೀತಿ ಪರೀಕ್ಷೆ ಬರೆದು ಯಾವ ಶ್ರೇಣಿಯನ್ನು ಪಡೆಯುತ್ತಾಳೋ ಎಂಬ ಆತಂಕ ಪಾಲಕರಲ್ಲಿ,ನಮ್ಮ ಶಾಲೆಯ ವಿದ್ಯಾರ್ಥಿಗಳು ಎಷ್ಟು ಹಾಗೂ ಯಾವ ಮಟ್ಟದ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಾರೆ ಎಂಬ ಕೌತುಕ ಶಿಕ್ಷಕರ ಮನದಲ್ಲಿ, ಇನ್ನೂ ಮಕ್ಕಳಂತೂ ಪ್ರಶ್ನೆ ಪತ್ರಿಕೆ ಯಾವ ಕ್ರಿಷ್ಟತೆಯಿಂದ (ಸರಳ- ಕಠಿಣ)ಕೂಡಿರುತ್ತದೆ ಎಂಬ ಆತಂಕ ಹಾಗೂ ಭಯದೊಂದಿಗೆ ದಿನ ದೂಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಪುಸ್ತಕಗಳ ಜೊತೆ ಗುದ್ದಾಟ,ಇದರ ವಿಚಾರವಾಗಿ ತಮ್ಮ ಊಟ ನಿದ್ದೆ ಹಾಗೂ ಆರೋಗ್ಯದ ಪರಿವೇ ಇಲ್ಲದೆ ಪರೀಕ್ಷಾ ತಯಾರಿಯನ್ನು ಮಾಡಿಕೊಂಡು ದುಗುಡ ದುಮ್ಮಾನಗಳೊಂದಿಗೆ ಪರೀಕ್ಷೆ ಎದುರಿಸ ಹತ್ತಿದ್ದಾರೆ.ಸ್ವಲ್ಪ ನಿಲ್ಲಿರಿ ಮಕ್ಕಳೇ!ಈ ಎಲ್ಲಾ ಭಯ ಆತಂಕಗಳನ್ನು ಬದಿಗೊತ್ತಿ ಸಮಾಧಾನಕರ ಹಾಗೂ ಶಾಂತಿಯುತ ಮನಸ್ಥಿತಿನಿಂದ ಪರೀಕ್ಷೆಗಳನ್ನು ನೀವು ಎದುರಿಸಬೇಕಾಗಿದೆ ಯಾವುದೇ ಒತ್ತಡ ಮನೋಭಾವವನ್ನು ಹೊಂದದೆ ಎಲ್ಲಾ ಪರೀಕ್ಷೆಗಳನ್ನು ಸಮಾಧಾನವಾಗಿ ಎದುರಿಸಬೇಕು.ಬದುಕು ತುಂಬಾ ದೊಡ್ಡದಿದೆ ಇದು ನಿಮ್ಮ ಜೀವನದ ಮೊದಲ ಹೆಜ್ಜೆಯಾಗಿದೆ ಉತ್ತಮ ಅಂಕಗಳನ್ನು ಪಡೆಯಬೇಕೆಂಬ ಹಂಬಲವಿರಲಿ ಆದರೆ ಅದುವೇ ನಿಮ್ಮ ಮಾನಸಿಕ ಖಿನ್ನತೆಯಾಗಬಾರದು. ಪಾಲಕರು ಕೂಡ ಅಷ್ಟೇ ಮಕ್ಕಳ ಮೇಲೆ ಯಾವುದೇ ಶ್ರೇಣಿ (ರ್ಯಾಂಕ) ಗಳಿಕೆಯ ಭಾರವನ್ನು ಹೊರಿಸಬೇಡಿ ಮಕ್ಕಳನ್ನು ಸ್ವಚ್ಛಂದವಾಗಿ ಹಾಗೂ ಶಾಂತವಾಗಿ ಓದಲು ಬಿಡಿ,ಪರೀಕ್ಷೆಗಳನ್ನು ಬರೆಯಲು ಕೂಡ ಬಿಡಿ,ಪ್ರಥಮ ಶ್ರೇಣಿ ಬರಲೇಬೇಕು ಎಂಬ ದುರಾಸೆಯು ಮಕ್ಕಳನ್ನು ಖಿನ್ನತೆಗೆ ಒಳಪಡಿಸುವಂತೆ ಮಾಡುತ್ತದೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಒಂದು ವೇಳೆ ಮಗುವು ಎಲ್ಲಾ ಪರೀಕ್ಷೆಗಳನ್ನು “ಮದ್ಯಮ” ರೀತಿಯಲ್ಲಿ ಬರೆದಿದ್ದರೂ ಅವರಿಗೆ ಬೆನ್ನು ತಟ್ಟುವ, ಪ್ರೋತ್ಸಾಹಿಸುವ ಹಾಗೂ ಆಶಾಭಾವವನ್ನು ಹೊಂದುವ ಮಾರ್ಗ ತೋರಿಸಿ ಇದರಿಂದ ಮಧ್ಯಮ ತೇರ್ಗಡೆಯ ಹೊಂದಿದ ಮಗುವು ಮುಂದೊಂದು ದಿನ ಉನ್ನತ ಸ್ಥಾನಕ್ಕೇರುವ ಸಾಧನೆಯನ್ನು ನೀವು ಕಾಣಬಹುದಾಗಿದೆ. ಜರ್ಮನಿಯಲ್ಲಿ ಜನಿಸಿ ವಿಶ್ವವಿಖ್ಯಾತಿಯನ್ನು ಪಡೆದ ಪ್ರಸಿದ್ಧ ವಿಜ್ಞಾನಿಯಾದ ಆಲ್ಬರ್ಟ್ ಐನ್ಸ್ಟೀನ್ ರವರು ಹುಟ್ಟು ಅಸಮಾನ್ಯ(abnormal)ಮಗುವಾಗಿದ್ದು, ಅವರ ಬಾಲ್ಯದ ಸ್ನೇಹಿತರು ಅವರನ್ನು brother boring(ಬೇಸರಿಸುವ ಹುಡುಗ) ಎಂದು ವ್ಯಂಗ್ಯವಾಡುತ್ತಿದ್ದರು. ಓದಿನಲ್ಲಿ ತುಂಬಾ ಹಿಂದೆಯಿರುವ ಮಗುವಾಗಿದ್ದ ಐನ್ ಸ್ಟೀನ್ ಆದ್ದರಿಂದ ಶಾಲೆಯಲ್ಲಿರುವ ಶಿಕ್ಷಕರು ಅವರಿಗೆ ಶಾಲಾ ಪಾಠ ತಲೆಗೆ ಹತ್ತುವುದಿಲ್ಲ ವೆಂದು ಅವರ ತಾಯಿಗೆ ದೂರನ್ನು ನೀಡುತ್ತಾರೆ ಅಲ್ಲದೆ ಶಾಲೆಗೆ ಕಳಿಸಬೇಡಿ ಎಂದು ಪತ್ರದ ಮೂಲಕ ಬರೆದು ಕಳುಹಿಸುತ್ತಾರೆ.ಇದರಿಂದ ನೊಂದ ತಾಯಿ ತನ್ನ ಮಗನಿಗೆ ಮನೆಯಲ್ಲಿಯೇ ಓದು,ಬರಹದ ಅಭ್ಯಾಸವನ್ನು ಮಾಡಿಸುತ್ತಾಳೆ ಮುಂದೊಂದು ದಿನ ಇಂತಹ ಮಧ್ಯಮ ಬುದ್ಧಿ ಹೊಂದಿದ ಮಗುವೇ ಜಗತ್ತೇ ನಿಬ್ಬೆರಗಾಗುವಂತೆ ನೋಡುವ ಮಹಾನ್ ವಿಜ್ಞಾನಿಯಾಗಿ ಬೆಳೆಯುತ್ತಾನೆ ಅವರ ಒಂದು “ಸಾಪೇಕ್ಷ ಸಿದ್ದಾಂತ” ಭೂಮಿ ಇರುವ ತನಕ ಅವರ ಕೊಡುಗೆಯನ್ನು ಮರೆಯುವ ಹಾಗಿಲ್ಲ ಈ  ಜಗತ್ತು .ಅಲ್ಲದೆ ಅಮೆರಿಕಾದ ವಿಜ್ಞಾನಿಯಾದ ಥಾಮಸ್ ಅಲ್ವಾ ಎಡಿಸನ್ನರು ಜಗತ್ತಿನ ಕತ್ತಲೆಯನ್ನು ತಾವು ಸಂಶೋಧಿಸಿದ “ವಿದ್ಯುತ ಬಲ್ಬ್ “ನಿಂದಾಗಿ ಪ್ರಜ್ವಲಿಸುವಂತೆ ಮಾಡಿದರು.ಅವರು ಕೂಡ ತಮ್ಮ ಸಂಶೋಧನೆಯ ಅವಧಿಯಲ್ಲಿ ಸುಮಾರು 10 ಸಾವಿರ ಸಾರಿ ತಮ್ಮ ಪ್ರಯತ್ನದಲ್ಲಿ ಸೋತವರಾಗಿದ್ದಾರೆ ಅಲ್ಲದೆ ಭಾರತದ ರಾಷ್ಟ್ರಪಿತ ಮಾನವತಾವಾದಿ ಜಗತ್ತಿಗೆ ಮಹಾತ್ಮರೆನಿಸಿದ “ಗಾಂಧೀಜಿ”ಯವರು ಕೂಡ ತಮ್ಮ ಶೈಕ್ಷಣಿಕ ಜೀವನದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು ಆದರೆ ಅವರಲ್ಲಿಯ ಸತ್ಯ ಅಹಿಂಸಾ ಮೌಲ್ಯಗಳು ಇಡೀ ಜಗತ್ತೇ ಕೈ ಮುಗಿಯುವಂತೆ ಮಾಡಿವೆ. ಇಂತಹ ಸಾಕಷ್ಟು ನಿದರ್ಶನಗಳನ್ನು ನಾವು ಇಂದು ನೋಡಬಹುದಾಗಿದೆ ಬಡ ಕುಟುಂಬದಲ್ಲಿ ಜನಿಸಿ ಆರ್ಥಿಕ ಸೌಲಭ್ಯಗಳಿಲ್ಲದೆ ತುಂಬಾ ಕಷ್ಟಪಟ್ಟು ದೊಡ್ಡ ಸಾಧನೆಯನ್ನು ಮಾಡಿರತಕ್ಕಂತಹ ಹಲವಾರು ಪುರುಷ -ಮಹಿಳೆಯರನ್ನು ನಾವು ಜಗತ್ತಿನಲ್ಲಿಂದು ಕಾಣಬಹುದಾಗಿದೆ.ಹಾಗಾಗಿ ಮಕ್ಕಳೇ ಬರೀ ಅಂಕ ಗಳಿಸುವ ಯಂತ್ರಗಳಾಗದೆ ಮುಂದಿನ ಬದುಕನ್ನು  ಉತ್ಕೃಷ್ಟತೆಯ ಕಡೆಗೆ ಸಾಗಿಸುವ ಜೀವನ ನಾವಿಕರಾಗಬೇಕಾಗಿದೆ “failure is mile stone of success.”ಎಂದು ಒಂದು ಗಾದೆ ಇದೆ ನಮ್ಮ ಜೀವನದ ನಡಿಗೆಯಲ್ಲಿ ಎಡವುವುದು ಸಹಜ ಆದರೆ ಅದನ್ನೇ ಮನಸ್ಸಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡಿಕೊಂಡು “ಆತ್ಮಹತ್ಯೆ “ಅಂತಹ ಹೀನ ಕೃತ್ಯಗಳನ್ನು ಮಾಡುವುದಾಗಲಿ ಅಥವಾ” ಮಾನಸಿಕ ಖಿನ್ನತೆ “ಹೊಂದಿ ಆರೋಗ್ಯದ ಸಮಸ್ಯೆಯನ್ನು ತಂದುಕೊಳ್ಳುವುದು ಇವು ಯಾವುದನ್ನು ನೀವು ಮಾಡಬಾರದಾಗಿದೆ. ಅಲ್ಲದೆ ನಿಮ್ಮ ಮನಸ್ಸನ್ನು ಹುರಿಗೊಳಿಸಿ,ಕಬ್ಬಿಣದ ದೃಢತೆಯನ್ನು ಮೈಗೂಡಿಸಿಕೊಂಡು ,ಈಗ ಸೋತರೆ ಏನು ? ಮುಂದೊಂದು ದಿನ ಗೆದ್ದೇ ಗೆಲ್ಲುವೆ! ಎಂಬ ಛಲವನ್ನು ಹೊಂದಿ ಸಾಗಿರಿ ಆಗ ಯಶಸ್ಸಿನ ದಾರಿ ತಾನೇ ನಿಮ್ಮನ್ನು ಸ್ವಾಗತಿಸುತ್ತದೆ ಆದ್ದರಿಂದ ಪರೀಕ್ಷಾ ಭಯವನ್ನು ತೂರಿ ಆತ್ಮವಿಶ್ವಾಸದಿಂದ ನಿಮ್ಮ ಶೈಕ್ಷಣಿಕ ಜೀವನದ ಮುನ್ನಡೆ ಬರೆಯಬೇಕಾಗಿದೆ ಪ್ರತಿಯೊಬ್ಬರೂ ಮಹತ್ತರ ಗುರಿಯನ್ನು ಹೊಂದಿ ಮುನ್ನಡೆಯಬೇಕಾಗಿದೆ. ದಿಟ್ಟ ನಿರ್ಧಾರ ನಿಮ್ಮಲ್ಲಿ ಮೂಡಬೇಕಾಗಿದೆ ಆದ್ದರಿಂದ ಪರೀಕ್ಷೆ ಬರೆಯುವ ನೀವೆಲ್ಲಾ ವಿದ್ಯಾರ್ಥಿಗಳು ಈ ಸಮಾಜದ ಅಮೂಲ್ಯ ರತ್ನಗಳಾಗಿದ್ದೀರಿ ಆದ್ದರಿಂದ ಯಾವುದೇ ಕೆಟ್ಟ ಯೋಚನೆಗಳನ್ನು ಮಾಡದೆ ಮಾನಸಿಕ ಸ್ವಾಸ್ಥ್ಯದೊಂದಿಗೆ ಪರೀಕ್ಷೆ ಎದುರಿಸಿ ನಿಮ್ಮ ಕುಟುಂಬಕ್ಕೆ, ಶಿಕ್ಷಕ ವರ್ಗಕ್ಕೆ ಹಾಗೂ ನಾಡಿಗಾಗಿ ಏನನ್ನಾದರೂ ಸಾಧನೆಯನ್ನ ಕೊಡುಗೆಯಾಗಿ ನೀಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಬದುಕಬೇಕಾಗಿದೆ ಭಾವಿ ಪ್ರಜಾ ಹಾಗೂ ಪ್ರಭುಗಳೇ ಎದೆಗೊಂದದೆ ನಿಮ್ಮ ಶೈಕ್ಷಣಿಕ ಜೀವನ ಮೊದಲ ಅಧ್ಯಾಯವನ್ನು ಸುಖಾಂತ್ಯದೊಂದಿಗೆ ಮುಗಿಸಬೇಕಾಗಿದೆ ಪರೀಕ್ಷೆಗಳು ಹೇಗೆ ಸಾಗಲಿ, ಒಳ್ಳೆಯ ಅಂಕ ಬರಲಿ ಬರದಿರಲಿ (ನಿಮ್ಮ ಊಹೆ ಅನುಸಾರ) ಆದರೆ ಅಂಕಗಳಿಕೆ ಒಂದೇ ಜೀವನವಲ್ಲ, ಅದನ್ನು ಮೀರಿಯೂ ನಿಮ್ಮ ಬದುಕು ಪ್ರಜ್ವಲಿಸಬೇಕಾಗಿದೆ ಒಮ್ಮೆ ಎಡವಿದರೆ ಏನಾಯಿತು ಮುಂದೆ ಸಾಧಿಸುವ ಛಲ ಹೊಂದಿ,ಪ್ರತಿ ಸೋಲು ನಿಮ್ಮಲ್ಲಿ ಗಟ್ಟಿತನ ಬೆಳೆಸಿ ಆತ್ಮವಿಶ್ವಾಸ ಹೊಂದುವಂತೆ ಮಾಡಬೇಕಾಗಿದೆ. ಅಂಕಗಳಿಕೆಯ ಯಂತ್ರಗಳಾಗದೆ ಉತ್ತಮ ಸಮಾಜಕ್ಕೆ ಉತ್ತಮ ಕೊಡುಗೆದಾರರಾಗಿ ಬಾಳಿರಿ.ಎಂದಿಗೂ ಸೋಲನ್ನು ಅಂತ್ಯವೆಂದು ಭಾವಿಸದೆ ಪ್ರತಿಯೊಂದು ಸೋಲನ್ನು ಛಲವನ್ನಾಗಿ ಪರಿವರ್ತಿಸಿ ಕೊಳ್ಳುವುದೆ ಆದರೆ ಒಬ್ಬ ಸಾಧಕರಾಗಿ ನೀವು ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ .ಆದ್ದರಿಂದ ಎಲ್ಲರೂ ಉತ್ಸುಕರಾಗಿ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳೊಂದಿಗೆ ನಿಮ್ಮ ಶೈಕ್ಷಣಿಕ ಜೀವನ ಸಾಗಲಿ ಯಾವುದೇ ಆತಂಕವಿಲ್ಲದೆ ಪರೀಕ್ಷೆಗಳನ್ನು ಎದುರಿಸಿ ಗೆದ್ದು ಬನ್ನಿ ಎಂದು ಹಾರೈಸುವೇ…..all the best children…

ಅಶ್ವಿನಿ ಅಂಗಡಿ. ಶಿಕ್ಷಕಿ ಹಾಗೂ ಸಾಹಿತಿ ಬದಾಮಿ...

Leave a Reply

Your email address will not be published. Required fields are marked *