ಬಸವಣ್ಣನವರ ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ಪರಿಕಲ್ಪನೆ.

Spread the love

ಲೇಖನ :ಬಸವಣ್ಣನವರ ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ಪರಿಕಲ್ಪನೆ.

  

12ನೇ ಶತಮಾನದ ಬಸವಾದಿ ಪ್ರಮಥರ ಅಂತಃಕರಣದ ಅನುಭವ ಮತ್ತು ಅನುಭಾವದ,ನಡೆ – ನುಡಿಗಳ ಮೂಲಕ ಹೊರಬಂದ ಸಾಹಿತ್ಯವೇ ವಚನ ಸಾಹಿತ್ಯ. ಈ ವಚನ ಸಾಹಿತ್ಯವು, ವಿಶ್ವ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕಾಣಿಕೆ ಅಂದರೆ ತಪ್ಪಾಗಕ್ಕಿಲ್ಲ, ವಚನ ಸಾಹಿತ್ಯವು ಪ್ರಜಾಪ್ರಭುತ್ವ ಹಾಗೂ ಮಾನವೀಯ ಮೌಲ್ಯಗಳ ವೈಚಾರಿಕ ಹಾಗೂ ವೈಜ್ಞಾನಿಕ ನಿಲುವುಗಳನ್ನು ಸಾರುವ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ ಎಂದರೆ ಅತಿಶಯೋಕ್ತಿಯಂತು ಅಲ್ಲವೇ ಅಲ್ಲ.  ಜಾಗತಿಕ ಮಟ್ಟದಲ್ಲಿ ಎಲ್ಲೂ ನಿಲುಕದ – ದೊರೆಯದ ವಚನ ಸಾಹಿತ್ಯವು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಟ್ಟಿಗೊಳಿಸುವ ವಿಶ್ವ ಶ್ರೇಷ್ಠ  ಸಂವಿಧಾನವಾಗಿದೆ. ಎಂದು ಹೇಳಬಹುದಲ್ಲದೆ ವಚನಗಳಲ್ಲಿರುವ ಅಂಶಗಳು ನಮ್ಮ ಭಾರತ ದೇಶದ ಸಂವಿಧಾನದ ಚೌಕಟ್ಟಿನಲ್ಲಿ ಸಹ ಕಾಣುತ್ತೇವೆ ಬಂಧುಗಳೆ. ಪ್ರಪಂಚಕ್ಕೆ ಸಮಾನತೆ ಸಂದೇಶ ಸಾರುವ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲು ಬಾರಿ ಜಾಗತಿಕ ಸಮುದಾಯಕ್ಕೆ  ದಾರೆಯರೆದು ಕೊಟ್ಟವರು ಅಂದರೆ ಅದನ್ನು ಜಾರಿಗೆ ತಂದವರು ಅಣ್ಣ ಬಸವಣ್ಣನವರು.ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉದ್ಧಾರಕ್ಕಾಗಿ,ಸರ್ವರ ಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರ ಆದಿಯಾಗಿ ಇಡೀ ಶರಣ ಸಂಕುಲಕ್ಕೆ ಸಲ್ಲುತ್ತದೆ ಮತ್ತು ಸಲ್ಲಲೇಬೇಕು. ಜೊತೆಗೆ ಸಕಲ ಜೀವಾತ್ಮರೆಲ್ಲರಿಗೂ ಲೇಸು ಬಯಸಿದ ಜಗತ್ತಿನ ಸಂತರ ಸಂತ, ಮಾಹಾ ಸಂತ,ಮೊಟ್ಟ ಮೊದಲ ಸಮತಾವಾದಿ,ಮಾನವೀಯ ಮೌಲ್ಯಗಳ ಹರಿಕಾರ ಬಸವಣ್ಣನವರು ಎಂಬುದು ಯಾರು ಅಲ್ಲಗಳೆಯುವಂತಿಲ್ಲ ಸ್ನೇಹಿತರೆ. ಹಾಗಾಗಿ ಮೌಲ್ಯಾಧಾರಿತ ಸಾಮರಸ್ಯ ಸಮಾಜದ ಸಮೃದ್ಧ ನಾಡು ಕಟ್ಟುವ ಕನಸು ಕಂಡ ಬಸವಣ್ಣನವರು ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಸಮಾಜಿಕವಾಗಿ, ರಾಜಕೀಯ, ಶೈಕ್ಷಣಿಕ, ಸಾಹಿತ್ಯ, ದಾಸೋಹ, ಕಲೆ,ಕೃಷಿ, ಕಾಯಕ, ದಯೇ,ಮಾನವೀಯ ಮೌಲ್ಯಗಳು ಸೇರಿದಂತೆ ವಿವಿಧ ಬಗೆಯ  ಮೌಲ್ಯಾಧಾರಿತ ನಿಸ್ವಾರ್ಥ ಸೇವೆಗಳನ್ನು ಜಾರಿಗೆ ತಂದು, ಬೋಧಿಸಿ ಪ್ರತಿಪಾದಿಸಿದ್ದಾರೆ.ಜೊತೆಗೆ ಶಾಂತಿ,ಸಹಬಾಳ್ವೆ, ಕರುಣೆ,ಅರಿವು, ಸಮಾನತೆಯ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮತ್ತು ತಲುಪಿಸುವ ಪ್ರಯತ್ನ ಸಹ ಮಾಡಿದ್ದಾರೆ. ವಿಶ್ವವೇ ಒಂದು ಕುಟುಂಬವಿದಂತೆ ಎನ್ನುವ ಆದರ್ಶ ನೀತಿಯ ಪಾಠವನ್ನು ಕಲಿಸಿದ್ದಾರೆ. ಹಾಗೆಯೇ ಬಸವಣ್ಣನವರು ಸೇರಿದಂತೆ ಪ್ರತಿಯೊಬ್ಬ ಶರಣರು ಒಂದಾಗಿ,ಒಗ್ಗಟ್ಟಿನಿಂದ ಕಾಯಕ ಮಾಡುವ ಮೂಲಕ ನಿಸ್ವಾರ್ಥಿಯಾಗಿ ಬದುಕು ಸಾಗಿಸುವ ಎದೆಗಾರಿಕೆಯನ್ನು ತೋರಿದ್ದಾರೆ. ಇದನ್ನು ಅವರ ವಚನಗಳ ಅಂತರಂಗದಿಂದ ತಿಳಿದುಕೊಳ್ಳಬಹುದಾಗಿದೆ.ಇನ್ನು ಸೌಹಾರ್ದವಾಗಿ ಬಾಳುವ ಮೂಲಕ  ಪ್ರೀತಿ – ಸ್ನೇಹಯವನ್ನು ಜಗತ್ತಿನ ಜನರಿಗೆ ಹಂಚುವ ಕೆಲಸವನ್ನು ಅವರೆಲ್ಲರೂ ಅಚ್ಚುಕಟ್ಟಾಗಿ ಮಾಡಿದ್ದಾರೆ.ಅದರಂತೆ ಅವರು ಬಾಳುವ ಮೂಲಕ ನಮ್ಮೆಲ್ಲರಿಗೂ ಪ್ರೇರಣೆ ಜೊತೆಗೆ ಮಾದರಿಯಾಗಿದಾರೆ ಎಂದೇ ಎದೆ ತಟ್ಟಿ ಹೇಳಬಹುದು.ಹೀಗಾಗಿ ಬಸವಣ್ಣನವರು ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ನಮಗೆ ಅವರ ಪ್ರಜಾಪ್ರಭುತ್ವ, ವೈಚಾರಿಕ ನಡತೆಯ ಮೂಲಕ ತಿಳಿದುಬರುತ್ತದೆ.  ವಚನ ಸಾಹಿತ್ಯ ಮತ್ತು ಭಾರತ ಸಂವಿಧಾನ: ವಚನ ಮತ್ತು ಸಂವಿಧಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಅಂದರೆ ಅವು ಎರಡೂ ಒಂದೇ ಎಂದರ್ಥ, ಅವು ಬೇರೆ, ಬೇರೆ ಎಂದರ್ಥವಲ್ಲ. ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ಸಂವಿಧಾನದಲ್ಲಿರುವ ಎಲ್ಲಾ ಪ್ರಜಾಪ್ರಭುತ್ವ ಅಂಶಗಳು ವಚನ ಸಾಹಿತ್ಯದಲಿವೆ.ಎನ್ನವದಂತು ನೂರಕ್ಕೆ ನೂರರಷ್ಟು ಸತ್ಯ. ಹಾಗಾಗಿ ದೇಶದ ಪ್ರಗತಿಗೆ ವಚನ ಸಾಹಿತ್ಯ ಎಷ್ಟೋ ಪ್ರಮುಖ್ಯವೋ, ಅಷ್ಟೇ ಮುಖ್ಯ ನಮ್ಮ ಭಾರತ ದೇಶದ ಸಂವಿಧಾನ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳುವುದು ಅತಿ ಅವಶ್ಯಕತೆ ಇದೆ. ಇನ್ನು ಈ ಎರಡು ತತ್ವಗಳಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಲ್ಲದೆ, ಪೂರಕ ಹಾಗೂ ಮಾರ್ಗದರ್ಶನ ಎನ್ನುವುದು ನಾವ್ಯಾರು ಮರೆಯಬಾರದು.ಆದ್ದರಿಂದ ದೇಶದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ, ಸ್ವಾತಂತ್ರ್ಯ ನೀಡಿದೆ.ಜೊತೆಗೆ ಪ್ರತಿಯೊಬ್ಬ ಪ್ರಜೆಗೂ ಸ್ವಚಂದವಾಗಿ ಬದುಕಲು ಅವಕಾಶ ನೀಡಿದೆ.ಇದರಂತೆ ಸಹ ವಚನ ಸಾಹಿತ್ಯವೂ ಪ್ರತಿ ಪ್ರಜೆಗೂ ಸಾಮರಸ್ಯ ಹಾಗೂ ಸಹಬಾಳ್ವೆ, ಸ್ನೇಹದಿಂದ ಬದುಕುವಂತೆ ಹಾಗೂ ಸಕಲ ಜೀವಾತ್ಮರಿಗೂ ಲೇಸನೇ ಬಯಸುವಂತೆ ಕರೆ ನೀಡಿದೆ. ಮಾನವೀಯ ಮೌಲ್ಯಗಳ ಹರಿಕಾರ ಮತ್ತು ಪ್ರಜಾಪ್ರಭುತ್ವದ ಪಿತಾಮಹ : ಬಸವಣ್ಣನವರು ಒಬ್ಬ  ಸಮಾಜವಾದಿಯಾಗಿ, ಪ್ರಜಾವಾದಿಯಾಗಿ, ಸಾಮಾಜಿಕ ನ್ಯಾಯ ಪರಿಪಾಲಕರಾಗಿ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರಾಗಿ ಈ ನಾಡಿನ ಶ್ರೇಯೋಅಭಿವೃದ್ದಿಗಾಗಿ ಹಗಲಿರುಳು ದುಡಿದಾರೆ. ಹಾಗೆಯೇ ವಿಶ್ವದ ಮೊದಲ ಮಾನವೀಯ ಮೌಲ್ಯಗಳ ಹರಿಕಾರ ಜೊತೆಗೆ ಪ್ರಜಾಪ್ರಭುತ್ವದ ಪಿತಾಮಹರಾಗಿ ವಿಶ್ವದ ಶ್ರೇಯಸ್ಸು ಬಯಸಿದ ಮೊದಲ ಮೇಧಾವಿ ಪುರುಷ ಅಣ್ಣ ಬಸವಣ್ಣನವರು, ಅವರು ಅಂದಿನ ಜನರ ಕಷ್ಟಗಳಿಗಾಗಿ ನೊಂದಿದ್ದಾರೆ. ಕಣ್ಣಿರು ಹಾಕಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದನೆ ಮಾಡಿದ್ದಾರೆ. ಹೀಗೆ ಜನಪರ ಕಾಳಜಿ ಕೆಲಸಗಳನ್ನು ಅತ್ಯಂತ ಶ್ರದ್ಧಾ ಭಕ್ತಿ ಭಾವದಿಂದ ಮಾಡಿ,ಜನಸಾಮಾನ್ಯರ  ಸೌಹಾರ್ದತೆಯ ಸ್ನೇಹವನ್ನು ಸಂಪಾದನೆ ಮಾಡಿರುತ್ತಾರೆ. ಈ ಎಲ್ಲಾ ಹಿನ್ನಲೆಯಲ್ಲಿ ಬಸವಣ್ಣನವರು ಮ್ಯಾಗ್ನಕಾರ್ಟ್‌ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಕಲ್ಪನೆಯಾದ ಸಂಸತ್ತ ಭವನವನ್ನು ನಿರ್ಮಿಸಿ,ಜಾಗತಿಕ ಲೋಕಕ್ಕೆ ಸಮತಾವಾದ ಸಮಾನತೆಯ ಸಂದೇಶವನ್ನು ಸಾರುವ, ಎತ್ತಿ ಹಿಡಿಯುವ ಕೆಲಸಗಳನ್ನು ನಿಟ್ಟಾಗಿ ಮಾಡುವ ಮೂಲಕ, ಆ  ತತ್ವಗಳನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಈ ಮಾಹಾನುಭಾವರಿಗೆ ಸಲ್ಲಬೇಕು. ಅದಕ್ಕಾಗಿ ಇವರಿಗೆ ವಿಶ್ವಗುರು ಎಂಬ ಬಿರುದು ಸಹ ಬಂದಿದೆ. ಇವರು ನಿರ್ಮಿಸಿದ ಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಭವನವು, ಇವರ ಆದರ್ಶ ನೀತಿಗಳು ವಿಶ್ವ ಪ್ರಜಾಪ್ರಭುತ್ವ ವ್ಯವಸ್ಥೆಗೆ  ಬದ್ರ ಅಡಿಪಾಯ ಎಂದರೆ ತಪ್ಪಾಗಲಾರದು. ಇನ್ನು ಇವರು ಮೊಟ್ಟ ಮೊದಲು ಕೊಟ್ಟ ಸಮಾನತೆ,ಸೌಹಾರ್ದತೆಯ  ಸಂದೇಶಗಳು ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರಿಯಾಗಿವೆ. ಹಾಗಾಗಿ ಅಂದು ಬಸವಣ್ಣನವರ ವೈಚಾರಿಕ ನಿಲುವು ಹೇಗಿತ್ತು ಎನ್ನುವುದಕ್ಕೆ ಇವರು ನಿರ್ಮಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸತ್ತು ಭವನವೇ ಸಾಟಿ ಮತ್ತು ಸಾಕ್ಷಿಯಾಗಿ ನಿಂತಿದೆ. ಆದ್ದರಿಂದ ಈಗಲಾದರೂ ಎಚ್ಚತ್ತು ಬಸವಣ್ಣನವರು ನೀಡಿರುವ ಮಾನವೀಯ ಮೌಲ್ಯಗಳ ಪರಿಕಲ್ಪನೆಯ ವಿಚಾರಗಳು ಸೇರಿದಂತೆ ಪ್ರಜಾಪ್ರಭುತ್ವದ  ಜೀವಾಳ ವಚನ ಸಾಹಿತ್ಯವನ್ನು ಅರಿತು ನಾವೆಲ್ಲರೂ ಮುಂದಡೆ ಸಾಗಬೇಕಾಗಿದೆ.

ಬಸವಣ್ಣನವರ ಪ್ರಜಾಪ್ರಭುತ್ವ ,ಮಾನವೀಯ ಮೌಲ್ಯಗಳ ಕಲ್ಪನೆ: ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ ಎನ್ನುವ ಮಾತುಗಳು ಇಲ್ಲಿ ವ್ಯಕ್ತಪಡಿಸುತ್ತಾ. ಅವರ ಒಂದು ವಚನದ ಸಾರ ಇಲ್ಲಿ ಪ್ರಸ್ತುತ ಪಡಿಸಿರುವೆ. ಕಳಬೇಡ, ಕೊಲಬೇಡ ಎಂಬ ಸಪ್ತಶೀಲದ ವಚನವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅಪರಾಧಗಳು ಈ ಜಗತ್ತಿನಲ್ಲಿ ನಡೆಯಲು ಸಾಧ್ಯವಿಲ್ಲ. ಹಾಗಾಗಿ  ಈ ವಚನ  ನಮ್ಮಲ್ಲರ ಬಾಳಿಗೆ ಹಿಡಿದ ಕೈಗನ್ನಡಿ, ಬಸವಣ್ಣನವರ ಅನುಭಾವದ ಅಕ್ಷರರೂಪ. ಶರಣರ ಪಥದಲ್ಲಿ ಸಾಗ ಬಯಸುವ ಪ್ರತಿಯೊಬ್ಬ ಪಥಿಕನ ದಾರಿ ದೀಪಗಳು. ಅಂಧಕಾರ, ಕಂಧಾಚಾರ,ಕಳ್ಳತನ, ದರೋಡೆ, ಮೋಸ, ಕೊಲ್ಲುವುದು, ಸುಳ್ಳು ಹೇಳುವುದು ಸೇರಿದಂತೆ ಮೌಡ್ಯದ  ಕೊಳೆಯನ್ನು ತೊಳೆಯುವ, ಅಂಧಕಾರದ ಮನಕ್ಕೆ ಅಂಟಿದ ಕಿಲುಬನ್ನು ತೊಳೆದು ಸ್ವಚ್ಚಗೊಳಿಸಿ ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರ ತರಂಗಿಣಿಗಳು ಈ ವಚನದಲ್ಲಿ ಕಾಣಬಹುದು. ಇನ್ನು ಈ ವಚನವು ಓದಿ ಸರಿಯಾಗಿ  ಅರ್ಥ ಮಾಡಿಕೊಂಡು ಪಾಲಿಸಿದರೆ ನಾವು ಉತ್ತಮ ಮನುಷ್ಯರಾಗಿ ಬದುಕುತ್ತೇವೆ. ಆದುದರಿಂದ ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೊತೆಗೆ ಈ ವಚನದ ಆಶಯವನ್ನೇ ನಮ್ಮ ಸಂವಿಧಾನ ತಿಳಿಸುತ್ತದೆ.ಹಾಗೆಯೇ ಸಮಾನತೆ ತತ್ವ ಸಾರಿದ ಬಸವಣ್ಣನವರು ಜಾತಿಯತೆ ಹೋಗಲಾಡಿಸಬೇಕೆಂದು ಕರೆ ನೀಡಿ ಅದರಂತೆ ಹೋರಾಟ ಮಾಡಿದರು. ಆದರೆ ಇಂದಿಗೂ ಅದು ಹೋಗಿಲ್ಲ ಎನ್ನುವದೇ ವಿಷಾದನೀಯ ವಿಚಾರ, ಬದಲು ಇನ್ನು ಸಮಾಜದಲ್ಲಿ ಬೆರೂರಿ ಹೆಚ್ಚಾಗುತ್ತಿದೆ ಎಂಬುದೇ ನೋವಿನ ಸಂಗತಿ, ಅದಕ್ಕಾಗಿ ಇದನ್ನು ಕಡಿವಾಣ ಹಾಕಲು ನಾವು ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವುದು ಅನಿವಾರ್ಯತೆ ಎದುರಾಗಿದೆ ಎನ್ನವದನ್ನು ಮನಗಂಡು ಆ ದಿಸೆಯಲ್ಲಿ ಹೆಜ್ಜೆ ಹಾಕುವುದು ಸೂಕ್ತ ಮತ್ತು ಸಮಂಜಸ ಜೊತೆಗೆ ವಚನಗಳ ಅಧ್ಯಯನ, ಅವುಗಳ ಪಾಲನೆಯಿಂದ ಜಾತ್ಯಾತೀತ ರಾಷ್ಟ್ರ, ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎನ್ನುವುದಂತು ನಾವು ಮರೆಯಬಾರದು ಸಹೋದರರೆ.ವಚನ ಸಾಹಿತ್ಯವು ಸಂವಿಧಾನದಂತೆ ಸರ್ವರಿಗೂ ಸಮಬಾಳು, ಸಮಪಾಲು ತತ್ವ ನೀಡುತ್ತದೆ. ಸರ್ವರ ಬಾಳು ಬೆಳಗಿಸುವುದು ಸೇರಿದಂತೆ ಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ಆಶಯ ತತ್ವವಾಗಿದೆ. ಹಾಗಾಗಿಯೇ 900 ವರ್ಷಗಳು ಕಳೆದರೂ ವಚನ ಸಾಹಿತ್ಯ ತತ್ವದ ಮೇಲೆ ಸಮಾಜ ದ್ರೋಹಿಗಳು ಹಾಗೂ ವೈದಿಕರಿಂದ ಎಷ್ಟೋ ದಬ್ಬಾಳಿಕೆ ನಡೆದರೂ ಸಹ ಇನ್ನು ಜೀವಂತವಾಗಿದೆಯಲ್ಲವೇ.ಹಾಗಾಗಿ ಬಸವಣ್ಣನ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸೀಗಬೇಕೆಂಬ ನಿಲುವೆ ಅವರದಾಗಿತ್ತು. ಬಸವಣ್ಣನವರ ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ದ್ವನಿಯಾಗಬೇಕೆಂದು ಬಯಸಿದರು. ಅಂತಲೇ ಅವರು ನಂಬಿ ಅದರಂತೆ ನಡೆದವರು ಹಾಗೆ ಧಾರ್ಮಿಕ, ಸಮಾಜಿಕ(ಪ್ರಜಾಪ್ರಭುತ್ವದ ಸಂಸತ್ತು ) ಕಾರ್ಯಗಳ ಸೇವೆಗಳು ಅಂದಿನ ಅನುಭವ ಮಂಟಪದ ಮೂಲಕ ಮಾಡಿದರು. ಹಾಗೆ ಶರಣರೆಲ್ಲರೂ ಸೇರಿ ಆದರ್ಶ ಸಂಗವನ್ನು ಕಟ್ಟಿದರು,ವಚನ ಸಾಹಿತ್ಯವನ್ನು ಸರ್ವ ಸ್ಪರ್ಶಿ ಹಾಗೂ ಸರ್ವ ವ್ಯಾಪ್ತಿ ಮಾಡಿ,ಕಸ ಗೂಡಿಸುವ ಮುತ್ತಾಯಕ್ಕನಿಂದ ಸಹ ವಚನಗಳನ್ನು ರಚನೆ ಮಾಡುವಲ್ಲಿ ಪ್ರೇರಣೆಯಾದವರು ನಮ್ಮ ಬಸವಣ್ಣನವರು ಹಾಗೂ ಸಕಲ ಶರಣರು.ಹಾಗಾಗಿಯೇ ವಚನ ಸಾಹಿತ್ಯ ಅಂದಿನ ಸಮಾಜದಲ್ಲಿ, ಜನಮಾನಸದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆತೆಗೆಯುವ ಸ್ವಭಾವದವು ಆಗಿದ್ದವು. ಅದರಂತೆ  ವಚನಗಳು ಓದುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದನ್ನು ಕಾಣುತ್ತೇವೆ. ಇನ್ನು ಕೆಲವು ವಚನಗಳು ಶರಣರು ಸಾಧಿಸಿದ ಆಧ್ಯಾತ್ಮಿಕ ಸಾಧನೆಯ ಶಿಖರದ ಕನ್ನಡಿಗಳಾಗಿವೆ,  ವಚನಗಳನ್ನು ಓದುತ್ತಿದ್ದರೆ ಶರಣರು ನಿಂತ ನೆಲೆ ಏರಿದ ಎತ್ತರ ಅನುಭಾವದ ಆಳ ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ.ಅದಕ್ಕಾಗಿಯೇ ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಸಮಾಜ ಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ. ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಬಸವಣ್ಣನವರು ಪ್ರಥಮರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು, ಕಲಿಯುವ ಮೂಲಕ ವಯಸ್ಕರ ಶಿಕ್ಷಣ ಕಲ್ಯಾಣದ ನಾಡಿನಲ್ಲಿ ಆರಂಭವಾಯಿತು. ಆರಂಭವಾಗಿದ್ದು ಐತಿಹಾಸಿಕ ಯಾಕೆಂದರೆ 21 ನೇ ಶತಮಾನದ ಈಗಿನ ಎಲ್ಲಾ ಸರಕಾರಗಳು ಕೋಟಿಗಟ್ಟಲೆ ಹಣ ಸುರಿದರೂ ಸಹ ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ. ಅಂದ ಮೇಲೆ 12ನೇ ಶತಮಾನದಲ್ಲಿ ಅವಿಧ್ಯಾವಂತರನ್ನು ವಿಧ್ಯಾವಂತರನ್ನಾಗಿ ಮಾಡಿ, ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹ ಮಾಡಿದ ಕೆಲಸ ಸಣ್ಣದಲ್ಲಾ,ಅದಕ್ಕಾಗಿ ಇದರ ಕೀರ್ತಿ ಮತ್ತು ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲಲೇಬೇಕು.

ಗೌರವದ ಮಾತು:

ಫ್ರಾನ್ಸ್ ದೇಶವು 18ನೇ ಶತಮಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯಿಂದ ಇತಿಹಾಸ ಸೃಷ್ಟಿಸಿತು. ಆದರೆ ನಮ್ಮ ಬಸವಣ್ಣನವರ ಶರಣ ಸಂಸ್ಕೃತಿಯು 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸೌಹಾರ್ದತೆ, ದಯೇ ಭಕ್ತಿ , ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆ ಸೇರಿದಂತೆ ಹಲವು ಅದ್ಭುತ ಚಿಂತನೆಗೆ ಮುನ್ನುಡಿ ಬರೆದಿವೆ. ಕಳಚೂರಿ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ವಿಶ್ವಗುರುವಾಗಿ, ತನ್ನ ಅನುಭವ ಮಂಟಪದ ಮೂಲಕ ಸಮಾನ ಮನಸ್ಕ ಚಿಂತಕರನ್ನು ಕಲ್ಯಾಣ ನಾಡಿಗೆ ಬರಮಾಡಿಕೊಂಡಿದ್ದು ಐತಿಹಾಸಿಕ ಕಾರ್ಯ. ಆ ಮೂಲಕ ಕಲ್ಯಾಣ ಪ್ರಾಂತ್ಯವು ವೈಚಾರಿಕ ಕ್ರಾಂತಿಯ ಕೇಂದ್ರಬಿಂದುವಾಯಿತು. ಈ ಪ್ರಾಂತ್ಯವು ಅಕ್ಕ ಮಹಾದೇವಿ, ಮಹಾನ್ ಯೋಗಿ ಅಲ್ಲಮ ಪ್ರಭು, ಶರಣ ಸಿದ್ಧರಾಮೇಶ್ವರ,ಚನ್ನಬಸವಣ್ಣ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ,ಡೋಹರ ಕಕ್ಕಯ್ಯ,ಮಡಿವಾಳ ಮಾಚಿದೇವ ಹಾಗೂ ಇತರ ಶಿವ-ಶರಣರ ವಚನ ಸಾಹಿತ್ಯ ಕೃಷಿ ಮತ್ತು ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿ,ಲೋಕವೆಲ್ಲಾ ಬೆಳಗಿದರು. ಇದರಂತೆ ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆ.ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ  ಸಮನಾಗಿ ದಾಸೋಹ,ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ  ಬಸವಣ್ಣನವರು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಎತ್ತಿ  ಹಿಡದಿದ್ದಾರೆ.ಹಾಗೂ ಚ್ಯುತಿ ಬರದಂತೆ ಜೀವನವನ್ನು ಸಾಗಿಸಿದ್ದಾರೆ.ಅದಕ್ಕಾಗಿ ಬಸವಣ್ಣನವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡು. ಅವರು ಹಾಕಿ ಕೊಟ್ಟ ಮಾನವೀಯ ಮೌಲ್ಯಗಳ ಪರಿಕಲ್ಪನೆಯ ಆಧಾರದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವೆಲ್ಲರೂ ಸೇರಿ ಇಂದು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುವುದು ಅಗತ್ಯವಿದೆ. ಜೊತೆಗೆ ವಚನ ಸಾಹಿತ್ಯದ ತತ್ವವನ್ನು ಜನಸಾಮಾನ್ಯರಿಗೆ ತಿಳಿಸುವ, ಪ್ರಚಾರ ಮಾಡುವ ಹೋಣೆಗಾರಿಕೆ ಪ್ರತಿಯೊಬ್ಬ ಬಸವಾಭಿಮಾನಿಗಳ ಮೇಲಿದೆ.

ಲೇಖಕರುಶರಣ ಸಂಗಮೇಶ ಎನ್ ಜವಾದಿ. ಕೊಡಂಬಲ,ಬೀದರ ಜಿಲ್ಲೆ.

Leave a Reply

Your email address will not be published. Required fields are marked *