ತಾಯಕನಹಳ್ಳ:ಅಗ್ನಿ ಅವಘಡ,ದುರ್ಘಟನೆಗೆ ಇಬ್ಬರು ಬಲಿ-

Spread the love

ತಾಯಕನಹಳ್ಳ:ಅಗ್ನಿ ಅವಘಡ,ದುರ್ಘಟನೆಗೆ ಇಬ್ಬರು ಬಲಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯ ಗೂಡಂಗಡಿಯಲ್ಲಿ ಕಾಫಿ, ಟಿ ಮಾಡಲು ಬಳಸುತ್ತಿದ್ದ ಮಿನಿ ಸಿಲಿಂಡರ್ ಸ್ಪೋಟಗೊಂಡು ಮಾವ ಮತ್ತು ಆತನ ತಂಗಿಯ ಮಗಳು ಇಬ್ಬರೂ ಸ್ಥಳದಲ್ಲೇ ಸುಟ್ಟು ಕರಕಲಾಗಿರುವ ದುರ್ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ನಡೆದಿದೆ. ತಾಯಕನಹಳ್ಳಿ ನಿವಾಸಿ ತಂಬಜ್ಜಪ್ಪರ ಕೃಷ್ಣಪ್ಪ( 28) ಮತ್ತು ಭೂಮಿಕಾ (11) ಮೃತ ದುರ್ದೈವಿಗಳು. ಮೃತ ಬಾಲಕಿ ಭೂಮಿಕಾ ಘಟನೆ ವಿವರ: ತಾಯಕನಹಳ್ಳಿ ಗ್ರಾಮದ ಹೊರವಲಯದ ಸರ್ಕಲ್ ಬಳಿ ಕೃಷ್ಣಪ್ಪ ಗೂಡಂಗಡಿ ನಡೆಸುತ್ತಿದ್ದ. ಆ ಅಂಗಡಿಯಲ್ಲಿ ಬೇಕರಿ ವಸ್ತಗಳನ್ನು ಮಾರುವುದರ ಜತೆಗೆ ಕಾಫಿ, ಟೀ ಮಾಡಲಾಗುತ್ತಿತ್ತು ಎನ್ನಲಾಗಿದೆ. ಅಂಗಡಿಯಲ್ಲಿ ಶುಕ್ರವಾರ ಬಾಲಕಿ ಭೂಮಿಕಾ ಒಬ್ಬಳೇ ಇದ್ದು, ಅವರ ಮಾವ ಕೃಷ್ಣಪ್ಪ ಹೊರಗೆ ಇದ್ದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಆಗ ಬಾಲಕಿಯನ್ನು ರಕ್ಷಿಸಲು ಹೋದ ಕೃಷ್ಣಪ್ಪಗೂ ಬೆಂಕಿ ವ್ಯಾಪಿಸಿ ಸುಟ್ಟು ಕರಕಲಾಗಿದ್ದಾನೆ ಎನ್ನುವುದು ಪ್ರತ್ಯಕ್ಷದರ್ಶಿಗಳ ಅನಿಸಿಕೆ. ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕಾನಹೊಸಹಳ್ಳಿ ಪಿಎಸ್ ಐ ತಿಮ್ಮಣ್ಣ ಚಾಮನೂರು ಸೇರಿ ಪೊಲೀಸಿ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ- ಅಂಗಡಿಯಲ್ಲಿ ಸುಟ್ಟು ಕರಕಲಾಗಿರುವ ಕೃಷ್ಣಪ್ಪ ಮತ್ತು ಆತನ ಸೊಸೆ ಭೂಮಿಕಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬ ನಿರ್ವಹಣೆಯ ಜವಾಬ್ದಾರಿಗೆ ಕೃಷ್ಣಪ್ಪ ಶ್ರಮಿಸುತ್ತಿದ್ದು, ಆತನಿಗೆ ಪತ್ನಿ,ಇಬ್ಬರು ಪುತ್ರರು, ಒಬ್ಬ ಪುತ್ರಿ ಸೇರಿ ತಾಯಿ, ತಮ್ಮಂದಿರು ಇದ್ದಾರೆ. ಅಲ್ಲದೆ, ಮೃತ ಕಷ್ಣಪ್ಪನ ಅಕ್ಕನ ಮಗಳು ಭೂಮಿಕಾ ಸಹ ಇವರ ಕುಟುಂಬದ ಜತೆಯೇ ವಾಸಿಸುತ್ತಿದ್ದಳು. ಬಡ ಕುಟುಂಬವಾದ್ದರಿಂದ ಜೀವನೋಪಾಯಕ್ಕೆ ಗೂಡಂಗಡಿ ನಡೆಸಲಾಗುತ್ತಿತ್ತು. ಇಬ್ಬರ ಸಾವಿಗೆ ಇಡೀ ಊರಿನ ಜನ ಮರುಗುತ್ತಿದ್ದರು. ಸ್ಥಳಕ್ಕೆ ಎಎಸ್ಪಿ ಭೇಟಿ- ತಾಯಕನಹಳ್ಳಿಗೆ ಎಎಸ್ಪಿ ಬಿ.ಎನ್.ಲಾವಣ್ಯಾ ಭೇಟಿ ನೀಡಿರುವುದು. ತಾಯಕನಹಳ್ಳಿಗೆ ಅಡಿಷನಲ್ ಎಸ್ಪಿ ಬಿ.ಎನ್.ಲಾವಣ್ಯಾ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಘಟನೆ ಕುರಿತು ಪಿಎಸ್ ಐ ತಿಮ್ಮಣ್ಣ ಚಾಮನೂರು ಅವರಿಂದ ಹಾಗೂ ಮೃತರ ಮನೆಗೂ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಹುಡೇಂ ಪಾಪನಾಯಕ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಅವರ ಪತಿ ದುರುಗಪ್ಪ, ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ, ಮಾಜಿ ಸದಸ್ಯ ರಸೂಲ್, ನಾಗೇಶ್, ರಘು ಸೇರಿ ಸದಸ್ಯರು ಇದ್ದರು  ವರಧಿ :- ಅಣ್ಣಪ್ಪ ಛಲುವಾಧಿ

Leave a Reply

Your email address will not be published. Required fields are marked *