ದೇವನಹಳ್ಳಿ “ಕೋವಿಡ್ ನಿರ್ಮೂಲನೆಗೆ ವಿಶೇಷ ಕಾರ್ಯಕ್ರಮ ರೂಪಿಸಿದ ದೇವನಹಳ್ಳಿ ಜಿಲ್ಲಾಡಳಿತಕ್ಕೆ ವಂದನೆಗಳು”
ಇಂದು ಬೆಂಗಳೂರಿನ ದೇವನಹಳ್ಳಿಯಲ್ಲಿ, ಜಿಲ್ಲಾಡಳಿತ ವತಿಯಿಂದ “ಮಕ್ಕಳ ತಜ್ಞರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮಕ್ಕೆ ಸಚಿವರಾದ ಶ್ರೀ ಆರ್. ಅಶೋಕ್ ಜಿ ಅವರೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಚಾಲನೆ ನೀಡಿದರು. ಬಳಿಕ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶ ಆಹಾರದ ಕಿಟ್ ಗಳನ್ನು ವಿತರಣೆ ಮಾಡಿದರು. ನಂತರ ಮಕ್ಕಳಲ್ಲಿ ಕೋವಿಡ್-19 ನಿರ್ವಹಣೆ ಚಿಕಿತ್ಸೆ ಮತ್ತು ಆರೈಕೆ ಮಾರ್ಗಸೂಚಿಯ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಸಂಭಾವನೀಯ ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು, ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಆರೋಗ್ಯ ತಪಾಸಣೆ, ವಿಶೇಷವಾಗಿ 6 ವಯಸ್ಸಿಗಿಂತ ಕಡಿಮೆ ವಯಸ್ಸಿನ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರ ತಂಡ ಮಾಡಲಿದೆ. 20 ತಂಡಗಳನ್ನು ಮಾಡಿದ್ದು, ಪ್ರತಿ ತಂಡದಲ್ಲಿ 5 ವೈದ್ಯರು ಇರಲಿದ್ದಾರೆ. ಇದೊಂದು ವಿನೂತನ ಹಾಗೂ ಉತ್ತಮ ಕಾರ್ಯಕ್ರಮವಾಗಿದ್ದು, ಕೋವಿಡ್ ನಿರ್ಮೂಲನೆಗಾಗಿ ವಿಶೇಷ ಕಾಳಜಿ ತೆಗೆದುಕೊಂಡಿರುವ ಸಚಿವರಾದ ಶ್ರೀ ಆರ್. ಆಶೋಕ್ ಜಿ ಅವರ ಹಾಗೂ ಜಿಲ್ಲಾಡಳಿತದ ಈ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರು, ಜನಪ್ರತಿನಿಧಿಗಳು, ವೈದ್ಯಾಧಿಕಾರಿಗಳು ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು.
ವರದಿ – ಮಹೇಶ ಶರ್ಮಾ