ವಿಶೇಷ ಲೇಖನ :- ಜಗಜ್ಯೋತಿ ಬಸವಣ್ಣ,,,,

Spread the love

ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ

ಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆ

ಸೊಲ್ಲತ್ತಿ ಜನವು ಹಾಡುವುದು…

ಉತ್ತಿ ಬಿತ್ತುವ ಮಂತ್ರ

ಬೆಳೆಯುವ ಮಂತ್ರ – ಸತ್ಯ ಶಿವ ಮಂತ್ರ

ನಿನ್ಹೆಸರು ಬಸವಯ್ಯ

ಮರ್ತ್ಯದೊಳು ಮಂತ್ರ ಜೀವನಕೆ…..

ಎಂಬುದಾಗಿ ಒಬ್ಬ ಕವಿಯು ಶ್ರೀ ಗುರು ಲಿಂಗಾಯತ ಸಂತ, ಜಗಜ್ಯೋತಿ,ಅಣ್ಣ ಬಸವಣ್ಣನ ಕುರಿತು ಸಮೃದ್ಧ ಭಕ್ತಿಯ ಸಾಲುಗಳಲ್ಲಿ ವರ್ಣಿಸಿದ್ದಾರೆ.

ಆಗಿನ ಕಟ್ಟಾವಾದಿಗಳ ಕಾಲದೊಳು ಸಮಾಜ ಸುಧಾರಣೆಗಾಗಿ ಜಗದೋದ್ಧಾರ ಹಾಗೂ ಲೋಕಕಲ್ಯಾಣಾ ರ್ಥವಾಗಿ ಕ್ರಿಸ್ತಶಕ 1134ರ ಕಾಲಘಟ್ಟದಲ್ಲಿ ಮಾದರಸ ಮಾದಲಾಂಬಿಕೆಯ ಶೈವ ಬ್ರಾಹ್ಮಣ ದಂಪತಿಗಳ ಉದರದಲ್ಲಿ ಜನಿಸಿತೊಂದು ಕ್ರಾಂತಿಕಿಡಿ.ಹುಟ್ಟೂರು ಬಸವನ ಬಾಗೇವಾಡಿಯ ಕೀರ್ತಿ ಪತಾಕೆಯನ್ನು ಹಾರಿಸುವಲ್ಲಿ ಆ ಶಿಶು ಎಂದೂ ಮೋಸ ಮಾಡಲಿಲ್ಲ. “ಶ್ರೀ ಜಾತವೇದ ಮುನಿಗಳ” ಶೈಕ್ಷಣಿಕ ಮಾರ್ಗದರ್ಶನದಲ್ಲಿ ಉಚಿತ ಸಂಸ್ಕಾರ, ವೇದೋಪನಿಷತ್ತು ಹಾಗೂ ಸದ್ಗುಣಗಳ ಪಠ್ಯವು ಶ್ರೀ ಬಸವಣ್ಣನವರನ್ನು ಸರ್ವೋತ್ತಮನನ್ನಾಗಿ ಬೆಳೆಸುವಲ್ಲಿ ದಾರಿದೇವಿಗೆಗಳಾದವು.ಇಷ್ಟಲಿಂಗದ ಪೂಜಿತರಾದ ಶ್ರೀ ಬಸವರಸರು ಲೋಕವೆಲ್ಲ ಶಿವನ ರೂಪವಾಗಿದ್ದು ಪ್ರತಿ ಕಣ ದಗುಳುಗಳು ಅವನ ಆಜ್ಞೆಯಲ್ಲಿ ನಲಿದಾಡುವವು ಎಂದು ಶಿವ ಭಕ್ತಿಯನ್ನು, ಸರಳ ಆಚಾರಗಳನ್ನು ಸಮಾಜಕ್ಕೆ ತಿಳಿಸಿ ಕೊಡುವುದರ ಮೂಲಕ ಧಾರ್ಮಿಕ ಸಾಮಾಜಿಕ ಸುಧಾರಣಾ ಕ್ರಾಂತಿಯನ್ನು ಮಾಡಿದರು. ಮುಂದೆ ನಿರ್ಮೂಹಿಯಾಗಿದ್ದ ಬಸವಣ್ಣನವರು ದೈವವಾಣಿಯ ಆಜ್ಞೆಯ ಮೇರೆಗೆ ಬಿಜ್ಜಳ ರಾಜಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಲದೇವರಸರ ಮಗಳಾದ ನೀಲಗಂಗಮ್ಮಳನ್ನು ವಿವಾಹವಾಗುವರು ತದನಂತರ ಅದೇ ರಾಜ್ಯದಲ್ಲಿ ಕೋಶಾಧ್ಯಕ್ಷರಾಗಿ ಕಾಯಕ ಮುಂದುವರಿಸುವರು. ಆಧ್ಯಾತ್ಮದ ಸೆಳೆತವು ಶ್ರೀ ಬಸವರನ್ನು ಸೂಜಿಗಲ್ಲಿನಂತೆ ಬರ ಸೆಳೆಯುತ್ತಿತ್ತು.ಭೋಗದ ಲೌಕಿಕ ಜೀವನವು ಕ್ಷಣ ಕ್ಷಣಕ್ಕೂ ನಶಿಸಿ ಲೋಕೋದ್ಧಾರದ ಬೀಜವು ಚಿಗುರೊಡೆಯಲು ಪ್ರಾರಂಭಿಸಿ ಶ್ರೀ ಗುರು ಅವರನ್ನು ಕಲ್ಯಾಣ ನಗರಕ್ಕೆ ಕರೆದೊಯ್ಯುವಂತೆ ಮಾಡಿತು. ಅಲ್ಲಿಂದ ಶ್ರೀ ಬಸವರಸರು ಆ ಶರಣ ಕೂಟದ ಅಣ್ಣನಾಗಿ ಹೊರಹೊಮ್ಮಿದರು. ಜಗತ್ತಿನ ಭಕ್ತಿಯ ಮೊಟ್ಟ ಮೊದಲ ಲೋಕಸಭೆಯು ಶ್ರೀಕಲ್ಯಾಣ ನಗರದಲ್ಲಿ ಜಾತಿ ರಹಿತ ಲಿಂಗ ತಾರತಮ್ಯವಿಲ್ಲದ ಮಹಾಶರಣರ ಕೂಟವು ಅಂದರೆ 770 ಅಮರ ಗಣಂಗಳು ರಚನೆಯಾದವು. ಆ ಸಭೆಯ ಶೂನ್ಯ ಪೀಠಾಧ್ಯಕ್ಷತೆಯನ್ನು “ಶ್ರೀ ಅಲ್ಲಮಪ್ರಭುಗಳು” ವಹಿಸಿಕೊಂಡಿದ್ದರು ಅಲ್ಲಿರುವ ಗಣಂಗಳ ಕಾಯಕ ಹಾಗೂ ವಚನಾಮೃತಗಳು ಲೋಕದ ಕೊಳೆಯನ್ನು ನಶಿಸಿ ಪರಿಶುದ್ಧಗೊಳಿಸುವ ಶುದ್ದಿಕ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿದ್ದವು.

* ಬಸವಣ್ಣನವರ ಸಾಮಾಜಿಕ ಸುಧಾರಣೆಗಳು*

ಕಟ್ಟಾ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡಿದ್ದ ಜಡ ಸಮಾಜವನ್ನು ಇವರು ತಮ್ಮ ತತ್ವವಾದ “ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ”ಮೂಲಕ ಸಮಾಜದ ಜಡತ್ವವನ್ನು ಹೋಗಲಾಡಿಸುವ ಕಾರ್ಯಗಳನ್ನು ಮಾಡಿದರು. ಸಮಾಜದಲ್ಲಿಯ ಶ್ರೇಣಿ ತಾರತಮ್ಯ ,ಲಿಂಗ ತಾರತಮ್ಯ ಹಾಗೂ ಮೂಢ ಆಚರಣೆಗಳನ್ನು ಬಹಿಷ್ಕರಿಸುವುದರ ಮೂಲಕ ಸಮಾಜದಲ್ಲಿ 12ನೇ ಶತಮಾನವನ್ನು ಭಕ್ತಿಯ ಕ್ರಾಂತಿಯುಗವನ್ನಾಗಿ ಹುಟ್ಟು ಹಾಕಿದರು.

. ಜಾತಿ ಮತೀಯ ಕಂಡನೆ

. ಮೂಢನಂಬಿಕೆಯ ಖಂಡನೆ

. ಬಹುದೇವತಾರಾಧನೆಯ ಖಂಡನೆ

. ಮೂರ್ತಿ ಪೂಜೆಯ ಖಂಡನೆ

.  ಪ್ರಾಣಿ ಬಲಿಯ ನಿರ್ಮೂಲನೆ

. ಸಹ ಭೋಜನಕ್ಕೆ ಪ್ರೋತ್ಸಾಹ

. ಅಂತರ್ಜಾತಿಯ ವಿವಾಹಕ್ಕೆ ಪ್ರೋತ್ಸಾಹ

. ಅಸ್ಪೃಶ್ಯತೆಯ ಖಂಡನೆ

. ನಿತ್ಯ ಕರ್ಮ.. ಇವೆಲ್ಲವೂ ಇವರ ತತ್ವಾದರ್ಶಕಗಳಾಗಿದ್ದವು. ಸಮಾಜದಲ್ಲಿ ಪ್ರತಿಯೊಂದು ಹಂತದಲ್ಲೂ ಸುಧಾರಣೆಗಾಗಿ ಹಗಲಿರುಳು ದುಡಿದು ಸಾಧಿಸಿದ ಅಧಮ್ಯ ಚೇತನವಾಗಿದ್ದರು ಶ್ರೀ ಬಸವಣ್ಣನವರು.

* ಧಾರ್ಮಿಕ ಸುಧಾರಣೆಗಳು *

ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರಾದವರು ಪುರುಷ ಮತ್ತು ಪ್ರಕೃತಿಯ ಮಿಲನದ ತತ್ವ ಹೇಳಿದರು ಪ್ರತಿಯೊಬ್ಬರ ಜೀವನದಲ್ಲಿ ಅಷ್ಟಾವರಣ ಪಾಲನೆಯ ಸಿದ್ಧಾಂತವನ್ನು ಮಂಡಿಸಿದರು .

1.ವಿಧೇಯತೆ

2.ಲಿಂಗ ಪೂಜೆ

3.ಜಂಗಮಸೇವೆ

  1. ಹಣೆಗೆ ವಿಭೂತಿ

5.ರುದ್ರಾಕ್ಷಿ ಧಾರಣೆ

6.ಪಾದೋಧಕ ಸೇವನೆ

7.ನೈವೇದ್ಯ ನೀಡಿ ಪ್ರಸಾದ ಸ್ವೀಕಾರ

8.ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಪಠಣ         ಇವುಗಳನ್ನು ಜಾತಿಭೇದ ಹಾಗೂ ಲಿಂಗಭೇದವನ್ನು ಮಾಡದೆ ಅನುಪಾಲಿಸಲು ತಿಳಿ ಹೇಳಿದರು

* ಸ್ತ್ರೀಯರಿಗೆ ಸ್ಥಾನಮಾನ *

ಕ್ರಿಸ್ತಶಕ 11 ಹಾಗೂ 12ನೇ ಶತಮಾನದಲ್ಲಿ ಸ್ತ್ರೀಯರಿಗೆ ಉತ್ತಮ ಸ್ಥಾನಮಾನ ದೊರಕಿದ್ದು ಬಸವಣ್ಣನವರ ಅಭೂತಪೂರ್ವ ಸಿದ್ದಾಂತಗಳ ಮೂಲಕ.ಸ್ತ್ರೀಯರಿಗೆ ಸಿಗಬೇಕಾದ ಉಚಿತ ಸ್ಥಾನಮಾನಗಳ ಅರಿವನ್ನು ಹಾಗೂ ಸ್ತ್ರೀಯ ಮಹತ್ವ ಸ್ತ್ರೀಯ ಶಕ್ತಿಯ ಕುರಿತು ಅಂದ ಸಮಾಜಕ್ಕೆ ತಿಳಿಸಿಕೊಟ್ಟವರು ನಮ್ಮ ಬಸವಣ್ಣ ಅದರ ಫಲವಾಗಿ ಅನುಭವ ಮಂಟಪದಲ್ಲಿದ್ದ ಶಿಕ್ಷಣವಂತ ಶರಣೆಯರಾದ ಅಕ್ಕಮಹಾದೇವಿ,ನೀಲಾಂಬಿಕೆ ಅಂತಹ ಮಹಿಳಾ ವಚನ ಕಾರ್ಯಕರ್ತೆಯರು ಬೆಳಕಿಗೆ ಬಂದರು.

* ದಾಸೋಹ ತತ್ವ *

ಆಗಿನ ಶರಣ ಕೂಟವು ದಾಸೋಹ ತತ್ವವನ್ನು ತಮ್ಮ ಮೂಲ ಮಂತ್ರವನ್ನಾಗಿಸಿಕೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಅತ್ಯಂತ ತೃಪ್ತಿ ಹಾಗೂ ಭಕ್ತಿಯಿಂದ ಮಾಡುತ್ತಿದ್ದು ಪ್ರಸಾದ ದಾಸೋಹವು ಮುಖ್ಯವಾಗಿ “ಸಹ ಭೋಜನದ ಸಿದ್ಧಾಂತವನ್ನು” ಒಳಗೊಂಡಿತ್ತು.

* ಅನುಭವ ಮಂಟಪ *

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ  ನೀಡಿ ಕೆಟ್ಟರು ನಿಜವಿಲ್ಲದೆ /

ಮಾಡುವ ನೀಡುವ ನಿಜಗುಣವೆಲ್ಲಡೆ

ಕೂಡಿಕೊಂಬ ನಮ್ಮ ಕೂಡಲಸಂಗಮದೇವ //

ಮನೆ ನೋಡಾ ಬಡವರು ಮನ ನೋಡಾ ಫಲ

ಸೋಂಕಿನಲ್ಲಿ ಶುಚಿ ಸರ್ವಾಂಗ ಕಲಿಗಳು /

ಪಸರುಕ್ಯನುವಿಲ್ಲಾ ಬಂದ ತತ್ಕಾಲಕೆ ಉಂಟು

ಕೂಡಲಸಂಗನ ಶರಣರು ಸ್ವತಂತ್ರ ಧೀರರು

ಕೂಡಲಸಂಗಮ ದೇವ //

ಎಂದು ಇಂತಹ ಸಾವಿರಾರು ವಚನಾಮೃತಗಳು ಅನುಭವ ಮಂಟಪದ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿ ಸಮಾಜವನ್ನು ಚಲನ ಸ್ಥಿತಿಗೆ ತರವಲ್ಲಿ ಪ್ರಮುಖ ಪಾತ್ರ ವಹಿಸಿದವು. ತಮ್ಮ ಜೀವನವನ್ನು ಸಮಾಜ ಸುಧಾರಣೆಗಾಗಿ ಮುಡುಪಾಗಿಟ್ಟಿದ್ದ ಕೊನೆಯ ಹಂತದಲ್ಲಿ ಶ್ರೀ ಗುರು ಬಸವಣ್ಣನವರು ಬದಲಾಗದ ಜನರ ನಿಂದನೆಗಳು ಹಾಗೂ ಕ್ರೂರ ಕಾರ್ಯಗಳ ಮೂಲಕ ರೋಸಿ ಹೋಗಿದ್ದು  ಶ್ರೀ ಕೂಡಲಸಂಗನ ಅಡಿಯಲ್ಲಿ ಐಕ್ಯರಾಗಲು ನಿರ್ಧರಿಸಿ ತಾವು ಈ ಭೂಮಿಗೆ ಬಂದಂತಹ ಕಾರ್ಯ ಸಂಪನ್ನವಾಯಿತೆಂದು ಎಂದು ತಿಳಿದು ಕ್ರಿ,ಶ,1196 ರಲ್ಲಿ ಸ್ವಯಂ ದೇಹ ತ್ಯಾಗ ಮಾಡಿದರು. ನೂರಾರು ಸಂಕಟಗಳ ಅನುಭವಿಸಿ ಸಾರ್ಥಕ ಜೀವನ ನಡೆಸಿ ನಮಗೆಲ್ಲಾ ಜಗಜ್ಯೋತಿಯಾದ ಕಾಯಕ ಸಂತನಿಗೆ ಸಾಷ್ಟಾಂಗ ನಮಸ್ಕಾರಗಳು…..

ಅಶ್ವಿನಿ ಅಂಗಡಿ. ಬದಾಮಿ..

Leave a Reply

Your email address will not be published. Required fields are marked *