ಪ್ರಬಲ ಜಾತಿಗಳ ಮೀಸಲಾತಿ ಬೇಡಿಕೆಯ ವಿರುದ್ದ ರಾಜ್ಯಾದ್ಯಂತ ಆಂದೋಲನ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕಾರಿಣಿ ಸಭೆ ನಿರ್ಧಾರ…

Spread the love

ಪ್ರಬಲ ಜಾತಿಗಳ ಮೀಸಲಾತಿ ಬೇಡಿಕೆಯ ವಿರುದ್ದ ರಾಜ್ಯಾದ್ಯಂತ ಆಂದೋಲನ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕಾರಿಣಿ ಸಭೆ ನಿರ್ಧಾರ…

-ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ವೇದಿಕೆ ಅಧಿಕೃತ ಉದ್ಘಾಟನೆ-ಕಾರ್ಯಕಾರಿಣಿ ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಬೆಂಗಳೂರು ನವೆಂಬರ್‌ 26: ಪ್ರವರ್ಗ 2ಎ ಗೆ ಪ್ರಬಲ ಜಾತಿಗಳನ್ನು ಸೇರಿಸಬೇಕು ಎನ್ನುವ ಬೇಡಿಕೆಯ ವಿರುದ್ದ ರಾಜ್ಯಾದ್ಯಂತ ಆಂದೋಲನ ನಡೆಸುವ ಒಕ್ಕೊರಲಿನ ತೀರ್ಮಾನವನ್ನು ಇಂದು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆಯಲ್ಲಿ ತಗೆದುಕೊಳ್ಳಲಾಗಿದೆ ಎಂದು ಜಾಗೃತಿ ವೇದಿಕೆಯ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್‌ ತಿಳಿಸಿದರು.

ಇಂದು ಶಾಸಕರ ಭವನದ ಸಭಾಂಗಣದಲ್ಲಿ ನಡೆದಂತಹ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕಾರ್ಯಕಾರಣಿ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಪ್ರಬಲ ಜಾತಿಗಳು 2ಎ ಪ್ರವರ್ಗದಲ್ಲಿರುವ ಜಾತಿಗಳ ಮೀಸಲಾತಿಯನ್ನು ಕಬಳಿಸುವಂತಹ ಕೃತ್ಯಕ್ಕೆ ಮುಂದಾಗಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಒತ್ತಡ ಹೇರಲಾಗುತ್ತಿದೆ. ಇದರ ವಿರುದ್ದ ಕಳೆದ ಮಾರ್ಚ್‌ ತಿಂಗಳಿನಿಂದ ಬೆಂಗಳೂರು ನಗರ, ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ಆಯೋಗದ ಅಧ್ಯಕ್ಷರಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಸಿದ್ದೇವೆ. ಆದರೆ, ಇದುವರೆಗೂ ನಮಗೆ ಸಕಾರಾತ್ಮಕವಾದಂತಹ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು. ನ್ಯಾಯಮೂರ್ತಿ ಆಡಿ ನೇತೃತ್ವದ ಸಮಿತಿಯನ್ನು ರದ್ದುಗೊಳಿಸಿ: ಪ್ರಬಲ ಜಾತಿಗಳನ್ನು 2ಎ ಪ್ರವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಆಡಿ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯನ್ನು ರದ್ದುಗೊಳಿಸಬೇಕು. ಈ ಸಮಿತಿಯಲ್ಲಿ ಪ್ರಬಲ ಜಾತಿಗೆ ಸೇರಿದವರನ್ನೇ ಸದಸ್ಯರನ್ನಾಗಿಸಿದ್ದು, ಇವರಿಂದ ನ್ಯಾಯಯುತವಾದಂತಹ ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದರು. ಡಿಸೆಂಬರ್‌ ತಿಂಗಳಲ್ಲಿ ವಿಭಾಗಾವಾರು ಸಮಾವೇಶ: ರಾಜ್ಯಾದ್ಯಂತ ಪ್ರಬಲ ಜಾತಿಗಳ ಮೀಸಲಾತಿ ಹೋರಾಟದ ವಿರುದ್ದ ಜನಜಾಗೃತಿಯನ್ನು ಮೂಡಿಸಲು ಡಿಸೆಂಬರ್‌ ತಿಂಗಳಲ್ಲಿ ವಿಭಾಗಾವಾರು ಸಮಾವೇಶವನ್ನು ಆಯೋಜಿಸಲಾಗುವುದು. ಮೊದಲ ಸಮಾವೇಶ ಗುಲ್ಬರ್ಗಾದಿಂದ ಪ್ರಾರಂಭಮಾಡಲು ಕಾರ್ಯಕಾರಣೀಯಲ್ಲಿ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್‌ ತಿಳಿಸಿದರು. ಅತಿಹಿಂದುಳಿದ ವರ್ಗಕ್ಕೆ ಸೇರಿದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ: ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಮಠಾಧೀಶರುಗಳ ನೇತೃತ್ವದಲ್ಲಿ ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಠಗಳಲ್ಲಿ ಸಭೆಯನ್ನು ಆಯೋಜಿಸಲಾಗುವುದು ಹಾಗೆಯೇ ಮಠಗಳನ್ನು ಶಕ್ತಿಯುತಗೊಳಿಸಲು ಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾಂತರಾಜ್‌ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರದ ಮೇಲೆ ಒತ್ತಡ: ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ನಡೆಸಿರುವ ಸಮೀಕ್ಷೆಯ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರದ ಮೇಲೆ ಒತ್ತಡವನ್ನು ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈಗಾಗಲೇ ಈ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆಯನ್ನೂ ಹೂಡಿದ್ದು, ಈ ಬಗ್ಗೆ ನ್ಯಾಯಾಲಯದಿಂದ ನಿರ್ದೇಶನ ದೊರೆಯುವ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು. ವೇದಿಕೆಯ ಗೌರವ ಸಲಹೆಗಾರರಾದ ಡಾ. ಸಿ.ಎಸ್‌ ದ್ವಾರಾಕಾನಾಥ್‌ ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈಗಿನ ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು “ಉನ್ನತ ಮಟ್ಟದ ಸಮಿತಿ”ಯನ್ನು ಸರ್ಕಾರ ಮಾಡಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗ ಸರ್ಕಾರದ ಮುಂದಿರುವುದೆಂದರೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ “ಜಾತೀವಾರು ಸಮೀಕ್ಷೆ” (socio economical & educational survey)ಯನ್ನು ಸ್ವೀಕರಿಸಿ ಸಾರ್ವಜನಿಕ ವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಹೇಳಿದರು.ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್‌, ಖಜಾಂಚಿ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *