ರೈತ ಬೆಳೆದ ಮೆಕ್ಕೆಜೋಳದ ತೆನೆ ಬಳಸಿ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ಮಂದಿರ ನಿರ್ಮಾಣ.

Spread the love

ಕೋಟ್ಯಂತರ ಹಿಂದೂಗಳ ಕನಸಿನ ರಾಮಮಂದಿರ ಜ.22ಕ್ಕೆ ಲೋಕಾರ್ಪಣೆ ಆಗುತ್ತಿದ್ದು, ಈ ಅದ್ಭುತ ಕ್ಷಣ ಕಣ್ತುಂಬಿಕೊಳ್ಳಲು‌ ರಾಮಭಕ್ತರು ಕಾತುರರಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊಪ್ಪಳದ ರೈತರೊಬ್ಬರು ತಮ್ಮ ಹೊಲದಲ್ಲೇ ರಾಮಮಂದಿರ ಮಾದರಿ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ರೈತ ತಾತನಗೌಡ ತಾವು ಬೆಳೆದ ಮೆಕ್ಕೆಜೋಳದ ತೆನೆ ಬಳಸಿ ಅಯೋಧ್ಯೆಯ ರಾಮಮಂದಿರದ ಮಾದರಿಯಲ್ಲಿ ಮಂದಿರ ನಿರ್ಮಾಣ ಮಾಡಿದ್ದಾರೆ. ಜನವರಿ 22 ರಂದು ಅಯೋಧ್ಯೆಗೆ ತೆರಳಿ ರಾಮಮಂದಿರ ನೋಡಲು ಎಲ್ಲರಿಂದ ಸಾಧ್ಯವಿಲ್ಲ. ಈ ಹಿನ್ನೆಲೆ ಗ್ರಾಮೀಣ ಜನರಿಗೆ, ರೈತರಿಗೆ ತಮ್ಮ ಊರಿನಲ್ಲೇ ರಾಮನ ದರ್ಶನ ಪಡೆಯಲು, ರೈತರು ತಾವು ಬೆಳೆದ ಮೆಕ್ಕೆಜೋಳದ ತೆನೆ ಬಳಸಿ ರಾಮಮಂದಿರ ಮಾದರಿ ನಿರ್ಮಿಸಿದ್ದಾರೆ. ಓಜನಹಳ್ಳಿ ಗ್ರಾಮದಲ್ಲಿನ ಈ ರಾಮಮಂದಿರ ಮಾದರಿ ನಿರ್ಮಾಣಕ್ಕೆ 5 ಸಾವಿರ ಮೆಕ್ಕೆಜೋಳದ ತೆನೆ ಬಳಸಲಾಗಿದೆ. ಒಂದು ವಾರದಿಂದ 12 ಜನರು ಸೇರಿ ಮಂದಿರ ಮಾದರಿ ನಿರ್ಮಿಸಿದ್ದಾರೆ. ಈ ಮಂದಿರ ನಿರ್ಮಾಣ ಮಾಡಲು ಖಾಸಗಿ ಸೀಡ್ಸ್ ಕಂಪನಿ ರೈತರಿಗೆ ಸಹಕಾರ ನೀಡಿದ್ದು, ರಾಮಮಂದಿರ ಸಿದ್ಧವಾಗಿದೆ. ಈ ರಾಮಮಂದಿರದ ಮಾದರಿಯನ್ನ ಜನವರಿ 22 ರ ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಇಲ್ಲಿಂದಲೇ ಅಯೋಧ್ಯೆಯ ರಾಮಮಂದಿರದ ದರ್ಶನದ ಅನುಭೂತಿಯನ್ನು ಹಳ್ಳಿಯ ರೈತರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸದ್ಯ ಈಗಾಗಲೇ ಈ ಮಂದಿರ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಆಗಮಿಸುತ್ತಿದ್ದಾರೆ. ರೈತರ ಫಸಲಿನಿಂದ ನಿರ್ಮಾಣ ಆಗಿರುವ ಈ ರಾಮ ಮಂದಿರ ಮಾದರಿ ರೈತರ ಆಕರ್ಷಣೆ ಆಗಿದ್ದು, ಮಂದಿರ ನೋಡಲು ಜನರು ಮುಗಿಬಿದ್ದಿದ್ದಾರೆ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *