Blog

ವಿಶೇಷ ಲೇಖನ – ವಿಶ್ವ ಕಂಡ ಶ್ರೇಷ್ಠ ಯುಗ ಪುರುಷ ಅಣ್ಣ ಬಸವಣ್ಣ.

Spread the love

ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ, ಮಹಾನ್ ಋಷಿ ಮುನಿಗಳು, ರೈತರು,ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ಕ್ರಾಂತಿ ಸೂರ್ಯನಂತೆ ಸಮಾಜವನ್ನು ಸುಧಾರಿಸಿದ ಕೀರ್ತಿ ಅಣ್ಣ ಬಸವಣ್ಣನವರಿಗೆ ಸಲ್ಲಬೇಕಾಗುತ್ತದೆ. ಬಂಧುಗಳೇ ಅಂದಹಾಗೆ ವಿಶ್ವ ಸಂವಿಧಾನ ಶಿಲ್ಪಿ ಅಣ್ಣ ಬಸವಣ್ಣನವರು

ದೇಶದ ನಾಯಕರಲ್ಲ, ಅವರು ವಿಶ್ವ ನಾಯಕರಾಗಿದ್ದು, ದೇಶದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆ ಎಂಬ ಜಾತಿ ವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ನಡೆಸಿ, ಸಾಮಾಜಿಕ ಪೀಡುಗಿಗೆ ಚಿಕಿತ್ಸೆ ನೀಡಿದ ಮಹಾ ಮೇಧಾವಿ ಸಂತ ಅಣ್ಣನವರು.

ಅದಕ್ಕಾಗಿಯೇ  ಲೌಕಿಕದ ಅಧಿಕಾರದಲ್ಲಿದ್ದೂಆಂತರಿಕವಾಗಿ ಮಹಾ ಅನುಭಾವಿಯಾದುದು ಬಸವಣ್ಣನವರ ಅಂತರಂಗದ ಕಥೆ. ಬಸವಣ್ಣನವರ  ವಚನಗಳಲ್ಲಿ ಅದರ ಉಜ್ವಲ ಚಿತ್ರ ಕಾಣಬರುತ್ತದೆ. ಬಸವಣ್ಣನವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗಿನ ಪರಿಧಿಯಾಚೆಗೆ ಕೂಡಾ ಸಾರ್ವಕಾಲಿಕವಾಗಿ ನಿಲ್ಲುವಂತಹದುಗಾಗಿದೆ ಆತ್ಮೀಯರೇ.

ಹೀಗಾಗಿಯೇ ಅಂದು ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಸಮಯವದು.

ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿರುವ ಕಾಲವಾಗಿತ್ತು.ಇನ್ನು ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತು ದೂರದ ಮಾತಾಗಿತ್ತು. ಅಲ್ಲದೆ

ದೇವರ ಪೂಜೆ ಮಾಡುವ ಮತ್ತು ದೇವಸ್ಥಾನಕ್ಕೆ ಪ್ರವೇಶ ಕೊಡದೇ ಇದ್ದ ಸಮಯದಲ್ಲಿ ಬಸವಣ್ಣನವರು ಇದನ್ನು ನೋಡಿ ಬಹಳ ಸಂಕಷ್ಟ ಪಟ್ಟರು, ಹೇಗಾದರೂ ಮಾಡಿ ಸರಿಪಡಿಸಿ, ಸರ್ವರಿಗೂ ದೇವರ ಧ್ಯಾನ, ದರ್ಶನ ಪಡೆಯುವಂತಾಗಬೇಕೆಂದು ನಿಶ್ಚಯ ಮಾಡುವ ಮೂಲಕ ವೈಚಾರಿಕವಾಗಿ ಚಿಂತಿಸಿ, ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಇಟ್ಟು ಪೂಜಿಸುವ ಶಿವಯೋಗವನ್ನು ಕರುಣಿಸಿ ಕೊಟ್ಟು,ಸರ್ವರಿಗೂ ಇಷ್ಟಲಿಂಗ ಧಾರಣೆ ಮಾಡಿದರು. ಹೀಗೆ ನೂಂದವರ ಪರವಾಗಿ ಹತ್ತು ಹಲವು ಕ್ರಾಂತಿಕಾರಿ ನಡೆಯ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.ಇನ್ನು ಕೆಳ ಸಮುದಾಯಕ್ಕೆ ಅನುಭವ ಮಂಟಪದಲ್ಲಿ ಅವಕಾಶ ನೀಡಿದ ಪ್ರಯುಕ್ತ, ಅವರೆಲ್ಲರೂ ವಚನ ರಚನೆಗಳಲ್ಲಿ ತೊಡಗುವಂತೆ ಪ್ರೇರೆಪಿಸಿ,ವಚನಗಳನ್ನು ಬರೆಯುವಂತೆ ಮಾಡಿದವರು. ಜೊತೆಗೆ  ಅಂತರ್ಜಾತಿ ವಿವಾಹವನ್ನು ಮಾಡಿ  ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ,ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರು ಸಾರಿದಾರೆ. ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಹೋರಾಟ ಮಾಡಿದ್ದು ಕಾಣುತ್ತೇವೆ. ಇನ್ನು ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡುವ ಮೂಲಕ

ಸಮಾಜವನ್ನು ಸರಿ ದಾರಿಯಲ್ಲಿ ಕೊಂಡ್ಯೊಯುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದಾರೆ.ಅಂದು ಬಸವಣ್ಣನವರು ಕೆಳಗೆ ಬಿದ್ದವರನ್ನ ಯಾವ ರೀತಿ ಅಪ್ಪಿಕೊಂಡರು ಎಂಬುದಕ್ಕೆ ನಮಗಿಲ್ಲಿ ಅವರ ವಚನಗಳೆ ಸಾಕ್ಷಿಪ್ರಜ್ಞೆಯಾಗಿವೆ. ಬಸವಣ್ಣನವರು ತಮ್ಮನ್ನು ತಾವು ಕನಿಷ್ಠ ಮಟ್ಟದಲ್ಲಿ ಇಳಿದುಕೊಂಡು ಬಹು ಎತ್ತರಕ್ಕೆ ಬೆಳೆದ ಮಹಾನ್ ಚೇತನರಾಗಿದ್ದರು, ಅದಕ್ಕೆ ಅವರ ವಚನವೇ ಸಾಕ್ಷಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನು ನಿರೂಪಿಸುತ್ತದೆ. “ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ.” ಎಂಬುದಾಗಿ ಹೇಳುತ್ತಾರೆ, ಅಂದರೆ ಅಂದಿನ ಎಲ್ಲ ಜನಾಂಗವನ್ನ ಯಾವ ರೀತಿ ಒಲಿಸಿಕೊಂಡು ಅವರನ್ನು ಉನ್ನತ ಮಟ್ಟಕ್ಕ ಕರೆದುಕೊಂಡು ಹೋಗಬೇಕು ಎಂಬ ಸತ್ಯದ ದಾರಿ ಅಪ್ಪ ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು, ಹಾಗಾಗಿ ಅವರು ಪ್ರತಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ಮನೆಯ ಮಗನೆಂದು ಹೇಳಿಕೊಳ್ಳುತ್ತ ಅವರನ್ನ ಆಲಿಂಗಿಸಿಕೊಂಡು, ಯಾರು ಮಾಡದಂತ ಸಮಾಜಿಕ ಕ್ರಾಂತಿಯನ್ನು  12ನೇ ಶತಮಾನದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಹಲವು ವಚನಗಳಲ್ಲಿ ಕಾಣಬಹುದಾಗಿದೆ.

” ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.”

ಕೂಡಲಸಂಗಮದೇವನ ಸಾಕ್ಷಿಯಾಗಿ ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ, ನಾನು ಸಣ್ಣವ,ನಾನು ಅತ್ಯಂತ ಕೆಳ ಸಮಾಜದವ, ನಾನು ದಾಸ – ದಾಸಿಯ ಮಗ ಎಂದು ಹೇಳುವ ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಅಲ್ಲವೇ, ಇನ್ನು ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ದೊಡ್ಡದು,ಮಾನವೀಯ ನಡೆಗೆ ಇದು ಸಾಕ್ಷಿಯಾಗಿದೆ.ಇದೆ ತೆರನಾಗಿ ಎಲ್ಲ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದಡೆ ಸೇರಿಸುವ ಅವರ ಪ್ರಯತ್ನ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಅವರನ್ನು ಗೌರವದಿಂದ ಕಾಣುವ ಮನೋಧರ್ಮ ಬಸವಣ್ಣನವರದಾಗಿತ್ತು. ನಡೆನುಡಿಗೆ, ಅವರ ಸಿದ್ಧಾಂತಕ್ಕೆ ಎಲ್ಲರು ಮಣಿದು ಒಂದಡೆ ಸೇರಬೇಕೆಂದರೆ ಬಸವಣ್ಣನವರು ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರೆಲ್ಲರಿಗೆ ತಿಳಿ ಹೇಳುತ್ತ, ಸಂತೈಸುತ್ತ, ಸಕರಾತ್ಮಕವಾದ ಭಾವನೆಗಳನ್ನ ಜನರಲ್ಲಿ ತುಂಬಿ ಸತ್ಯದ ಕಡೆಗೆ ಅಂದರೆ ಸನ್ಮಾರ್ಗದ ಕಡೆಗೆ ಸೆಳೆದುಕೊಳ್ಳುತ್ತಾರೆ. ಅದಕ್ಕೆ ಅವರ ಈ ವಚನವು ಸಹ ನಮಗೆ ಸಾಕ್ಷಿಕರಿಸುತ್ತೆ.

” ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ.” ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ, ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತ. ಅವರಲ್ಲಿ ಉತ್ಸಾಹ ಹುರುಪು ತುಂಬಿ, ನವ ಚೈತನ್ಯವನ್ನೆ ಬರುವಂತೆ ಮಾಡುತ್ತಾರೆ ಬಸವಣ್ಣನವರು. ಕೊನೆಯಲ್ಲಿ ಅವರು ತಮ್ಮ ವಚನದ ಮೂಲಕ ಶೋಷಿತ ಸಮುದಾಯಕ್ಕೆ ತಮ್ಮನ್ನು ಅವರೆಲ್ಲ ಅಪ್ಪಿಕೊಳ್ಳಲಿ ಎಂಬ ಮನೋಭಾವದಿಂದ ಅವರಿಗೆ ಈ ರೀತಿಯಾಗಿ ನೀವೆದನೆ ಮಾಡಿಕೊಳ್ಳುತ್ತಾರೆ.”ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ,  ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.” ಈ ರೀತಿಯಾಗಿ ಅಪ್ಪ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಅಪ್ಪ ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಅವರ ಪಟ್ಟ ಪರಿಶ್ರಮ ಬಹಳ ದೊಡ್ಡದು.ಅದು ಇಂದಿಗೂ ಯಾರು ಪಟ್ಟಿಲ್ಲಾ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.

ಇನ್ನು ಒಂದು ಸಂಘಟನೆ, ಒಂದು ಚಳುವಳಿಯನ್ನ ಮಾಡಬೇಕಾದರೆ ಸಣ್ಣ ಕೆಲಸವಲ್ಲವದು, ಅದಕ್ಕೆ ಬೇಕಾದ ತಯಾರಿ, ಸಿದ್ಧಿಗಳನ್ನು ನಾವು ಮಾಡಿಕೊಂಡಿರಬೇಕಾಗುತ್ತದೆ ಎಂಬುದಕ್ಕೆ ಬಸವಣ್ಣನವರೆ ನಮಗೆ ಮಾದರಿ. ಹಾಗಾಗಿ ಅವರು ಬರೆದ ವಚನಗಳನ್ನ ಅರ್ಥ ಮಾಡಿಕೊಂಡು ಹೋದಾಗ ಮಾತ್ರ ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯದಾಗುತ್ತದೆ. ಪ್ರತಿ ಸಮಾಜಪರ ಹೋರಾಟಗಳು ಇದೆ ರೀತಿಯಲ್ಲಿದ್ದರೆ ನಾವು ಹಮ್ಮಿಕೊಂಡ ಹೋರಾಟ ಸಾರ್ಥಕತೆಯನ್ನ ಪಡೆಯುತ್ತದೆ. ಹೀಗಾಗಿಯೇ ಜಾಗತಿಕ ಸಮುದಾಯವು ಇವರನ್ನು ವಿಶ್ವ ಪ್ರಜಾಪ್ರಭುತ್ವದ ಪಿತಾಮಹ, ವಿಶ್ವ ಸಂವಿಧಾನ ಶಿಲ್ಪಿ ಎನ್ನುತ್ತಾರೆ. ಗೌರವ ನುಡಿ: ಬಸವಾದಿ ಶರಣರು ಜೀವಿಸಿದ್ದ ವಚನಾನುಭವಿಗಳ ಆ ಶತಮಾನವನ್ನು ನೆನೆದಾಗಲೆಲ್ಲ ಮೈಯೆಲ್ಲಾ ರೋಮಾಂಚನಕಾರಿಯಾಗುತ್ತದೆ. ಹೀಗೂ ಒಂದು ಯುಗವಿರಲು ಸಾಧ್ಯವೇ ಎನಿಸುವಂತಹ ಘಟನೆ ನಮ್ಮ ಎದುರಿಗೆ ಬಂದು ಹೋಗುತ್ತದೆ. ಆ ಅನುಭವ ಮಂಟಪವೆಂಬ ದೃಶ್ಯವೇ ಮಾನವೀಯತೆಯ ಮಹೋನ್ನತವಾದ ಸಮತಾಭಾವ ಸೃಷ್ಟಿಸುತ್ತದೆ. ಸುಮಾರು ಒಂಭತ್ತು ಶತಮಾನಗಳ ಹಿಂದೆಯಷ್ಟೇ ಅಷ್ಟೊಂದು ಪಕ್ವವಾದ ಕನ್ನಡದ ಭಾಷೆ ಜಾಗೃತಿಯಲ್ಲಿ ಇತ್ತು ಎಂದರೆ ಮನ, ಮನಸುಗಳು ರೋಮಾಂಚನವಾಗುತ್ತವೆ. ಎಲ್ಲ ಕಾಯಕದ ಶರಣರು, ಶರಣೆಯರು, ರಾಜನ ಆಸ್ಥಾನದವರು, ಸಾಧು, ಸಂತರು, ಸೇವಕ ವ್ಯಕ್ತಿತ್ವದವರು. ಹೀಗೆ ಎಲ್ಲರೂ ಸಮಾನರಾಗಿ, ಮೇಲುಕೀಳುಗಳ ಬೇದ, ಭಾವವಿಲ್ಲದೆ ಪರಸ್ಪರ ಗೌರವಗಳಿಂದ ಆಧ್ಯಾತ್ಮ ಚಿಂತನೆಯಲ್ಲಿ ಪಾಲ್ಗೊಂಡು. ವಿಚಾರ ವಿನಿಮಯ ನಡೆಸುತ್ತಿದ್ದ ಅಂತಹ ಯುಗದ ಕಲ್ಪನೆ ಯಾವುದೇ ಮುಂದುವರಿದ ಸಮಾಜದ ದಿನಗಳಲ್ಲೂ ಹಾಗೂ ವಿಶೇಷವಾಗಿ ಈಗಿನ ಕಾಲದ ಸಮಯದಲ್ಲಿಯೂ ಕಾಣದಂತಹ ಒಂದು ಅಪೂರ್ವ ಐತಿಹಾಸಿಕ, ವಿಶ್ವ ಕಂಡ ಶ್ರೇಷ್ಠ ಯುಗ. ಈ ಯುಗದ ಪ್ರಾತಿನಿಧಿಕ ಸೂತ್ರಧಾರ ಅಣ್ಣ ಬಸವಣ್ಣನವರು. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿ, ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತ ಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದ್ದನು ಜಗತ್ತು ಎಂದೆಂದಿಗೂ ಮರೆಯಲಾಗದು.ಅದಕ್ಕಾಗಿಯೇ ವಿಶ್ವ ಜನಸಮುದಾಯ ಅಣ್ಣ ಬಸವಣ್ಣನವರನ್ನು ವಿಶ್ವ ಕಂಡ ಶ್ರೇಷ್ಠ ಯುಗಪುರುಷ ಎಂದು ಹೆಮ್ಮೆಯಿಂದ ಕರೆಯುತ್ತಾರೆ.

ಲೇಖಕರು : ಸಂಗಮೇಶ ಎನ್ ಜವಾದಿ. ಪ್ರಗತಿಪರ ಚಿಂತಕರು, ಹೋರಾಟಗಾರರು.